ಮದುವೆ ಮಾತುಕತೆಗೆ ಆಹ್ವಾನ: ಮಾರಣಾಂತಿಕ ಹಲ್ಲೆ

ಶನಿವಾರ, 2 ಮೇ 2015 (17:00 IST)
ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಗಂಡು ಮಗುವನ್ನು ಕರುಣಿಸಿದ್ದ ವ್ಯಕ್ತಿಯೋರ್ವ ಮದುವೆ ಮಾತುಕತೆಗೆಂದು ಕರೆಸಿಕೊಂಡು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಗರದ ಚೆನ್ನಸಂದ್ರದಲ್ಲಿ ನಡೆದಿದೆ. 
 
ಆರೋಪಿ ಯುವಕನನ್ನು ಸುನೀಲ್ ಕುಮಾರ್(29) ಎಂದು ಹೇಳಲಾಗಿದ್ದು, ಆತ ನಗರದ ಚೆನ್ನಸಂದ್ರ ನಿವಾಸಿ ಎಂದು ಹೇಳಲಾಗಿದೆ. 
 
ಪ್ರಕರಣದ ಹಿನ್ನೆಲೆ: ಆರೋಪಿಯು ಯುವತಿಯೋರ್ವಳೊಂದಿಗೆ ಕಳೆದ ನಾಲ್ಕು ವರ್ಷಗಳಿಂದ ನಿಕಟ ಸಂಪರ್ಕ ಹೊಂದಿದ್ದ ಎನ್ನಲಾಗಿದ್ದು, ಗಂಡು ಮಗುವನ್ನೂ ಕರುಣಿಸಿದ್ದ. ಆದರೆ ಮದುವೆಯಾಗುವುದಾಗಿ ತಿಳಿಸಿದ್ದ ಆತ ಇಂದು ಮದುವೆ ಮಾತುಕತೆಯ ನೆಪ ಹೇಳಿ ಯುವತಿಯ ಕುಟುಂಬಸ್ಥರನ್ನು ತಮ್ಮ ನಿವಾಸಕ್ಕೆ ಕರೆಸಿ ಮನ ಬಂದಂತೆ ಥಳಿಸಿ ಕಬ್ಬಿಣದ ರಾಡ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. 
 
ಯುವತಿಯನ್ನೂ ಸೇರಿದಂತೆ ಆಕೆಯ ಕುಟುಂಬ ಸದಸ್ಯರಾದ ಅನ್ನಪೂರ್ಣ, ಸಂದೀಪ್, ಮನೋಜ್ ಹಾಗೂ ಚೆನ್ನರೆಡ್ಡಪ್ಪ ಅವರ ಮೇಲೆ ಹಲ್ಲೆ ನಡೆಸಲಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಸ್ತುತ ಗಾಯಗೊಂಡಿರುವ ಗಾಯಾಳುಗಳನ್ನು ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. 
 
ನಗರದ ವರ್ತೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಸುನೀಲ್‌ನನ್ನು ಬಂಧಿಸಿದ್ದು, ವಿಚಾರಣೆಗೊಳಪಡಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ