ಜೆಡಿಎಸ್ ಎಂದಿಗೂ ಅಧಿಕಾರ ಹಿಡಿಯುವುದಕ್ಕೂ ಸಾಧ್ಯವಿಲ್ಲ: ಸಿಎಂ

ಭಾನುವಾರ, 17 ಮೇ 2015 (11:14 IST)
ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನು ಜೆಡಿಎಸ್ ಎಂದಿಗೂ ಇಳಿಸಲು ಸಾಧ್ಯವಿಲ್ಲ. ಜೆಡಿಎಸ್ ವಾಮಮಾರ್ಗ ಅನುಸರಿಸಿದ ಮಾತ್ರಕ್ಕೆ ಸರ್ಕಾರವನ್ನು ಕೆಳಗಿಸುವುದು ಸಾಧ್ಯವಿಲ್ಲ. ಅಷ್ಟೇ ಏಕೆ, ಜೆಡಿಎಸ್ ಎಂದಿಗೂ ಅಧಿಕಾರ ಹಿಡಿಯುವುದಕ್ಕೂ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯತಿರುಗೇಟು ನೀಡಿದ್ದಾರೆ.
 
`ಅಧಿಕಾರ ಹಿಡಿಯಲು ಸಾಧ್ಯವಿಲ್ಲದಿರಬಹುದು. ಆದರೆ, ಅಧಿಕಾರದಿಂದ ಕಾಂಗ್ರೆಸ್ ಸರ್ಕಾರವನ್ನು ಇಳಿಸುವ ಶಕ್ತಿಯಿದೆ' ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಗುರುವಾರ ಮಾಧ್ಯಮ ಸಂವಾದದಲ್ಲಿ ಹೇಳಿದ್ದರು. ಅದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ನಗರ ಪ್ರದಕ್ಷಿಣೆ ನಡೆಸಿದ ನಂತರ ಸುದ್ದಿಗಾರರಿಗೆ ಈ ರೀತಿ ಪ್ರತಿಕ್ರಿಯೆ ನೀಡಿದರು.
 
ಈ ಸರ್ಕಾರ ಜನರಿಂದ ಆಯ್ಕೆಯಾಗಿರುವ ಸರ್ಕಾರ. ಇದನ್ನು ಅಷ್ಟು ಸುಲಭವಾಗಿ ಕೆಳಗಿಸಲು ಸಾಧ್ಯವಿಲ್ಲ. ಪ್ರತಿಪಕ್ಷಗಳು ಇತ್ತೀಚೆಗೆ ಏಕೋ ಏನೋ ಭೂಗಳ್ಳರ ಬಗ್ಗೆ ಮಾತನಾಡಲು ಆರಂಭಿಸಿವೆ. ಪ್ರತಿಪಕ್ಷ ನಾಯಕರು ಸದನದ ಒಳಗೆ ಒತ್ತುವರಿ ತೆರವು ಮಾಡಿ ಎನ್ನುತ್ತಾರೆ. ಹೊರಗೆ ಬಂದು ಒತ್ತುವರಿ ಬೇಡ ಎಂದು ಸರ್ಕಾರದ ವಿರುದ್ಧ ಮಾತನಾಡುತ್ತಾರೆ. ಇವರಿಗೆ ಏನು ಹೇಳುವುದು ಎಂದು ಪ್ರಶ್ನಿಸಿದರು.

ವೆಬ್ದುನಿಯಾವನ್ನು ಓದಿ