ಜಯಾ ಪರವಾಗಿ ಮೇಲ್ಮನವಿಗೆ ಖ್ಯಾತ ವಕೀಲ ಜೇಠ್ಮಲಾನಿ ಆಗಮನ

ಸೋಮವಾರ, 29 ಸೆಪ್ಟಂಬರ್ 2014 (10:32 IST)
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ  ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ 4 ವರ್ಷಗಳ ಕಾಲ  ಜೈಲುವಾಸದ ಶಿಕ್ಷೆಗೆ ಗುರಿಯಾಗಿರುವ  ನಡುವೆ, ನಿಯೋಜಿತ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಜಯಾಗೆ ಜಾಮೀನು ಸಿಗುವ ನಿರೀಕ್ಷೆಯಲ್ಲಿರುವುದರಿಂದ ಈಗಲೇ ಮುಖ್ಯಮಂತ್ರಿಯಾಗಿ  ಪ್ರಮಾಣವಚನ ಸ್ವೀಕರಿಸದಿರಲು ನಿರ್ಧರಿಸಿದ್ದಾರೆ.

ಏತನ್ಮಧ್ಯೆ, ಜಯಲಲಿತಾ ಪರ ಖ್ಯಾತ ವಕೀಲ ರಾಮ್ ಜೇಠ್ಮಲಾನಿ ಮೇಲ್ಮನವಿ ಸಲ್ಲಿಸಲಿದ್ದು, ಲಂಡನ್‌ನಿಂದ ಜೇಠ್ಮಲಾನಿ ನೇರವಾಗಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಇಂದು ಹೈಕೋರ್ಟ್‌ನಲ್ಲಿ ಜಯಾ ಪರವಾಗಿ ಜೇಠ್ಮಲಾನಿ ತೀರ್ಪಿಗೆ ತಡೆ,  ಶಿಕ್ಷೆ ಅಮಾನತು ಕೋರಿ ಮೇಲ್ಮನವಿ ಸಲ್ಲಿಸಲಿದ್ದಾರೆ. 
 
ಭಾನುವಾರ ಹಿರಿಯ ವಕೀಲರ ತಂಡ ಜಯಲಲಿತಾ ಅವರನ್ನು ಸೆಂಟ್ರಲ್ ಜೈಲಿನ ವಿಸಿಟರ್ಸ್ ಕೋಣೆಯಲ್ಲಿ ಭೇಟಿ ಮಾಡಿ ಜಾಮೀನು ಅರ್ಜಿಯ ಒಕ್ಕಣೆಯನ್ನು ಕುರಿತು ಚರ್ಚಿಸಿದರು.
 
ಜಯಲಲಿತಾ ಅವರ ಆರೋಗ್ಯ ಮತ್ತು ವಯಸ್ಸಿಗೆ ಸಂಬಂಧಿಸಿದ ಕಾಯಿಲೆಗಳನ್ನು ಪರಿಗಣಿಸಿ ಅವರಿಗೆ ಶೀಘ್ರ ಜಾಮೀನು ಸಿಗುವಂತಾಗಲು ಜೇಠ್ಮಲಾನಿ ಅವರನ್ನು ವಕೀಲರನ್ನಾಗಿ ನೇಮಿಸಲು ನಿರ್ಧರಿಸಲಾಯಿತು.ಹೈಕೋರ್ಟ್ ಸೋಮವಾರದಿಂದ ಅಕ್ಟೋಬರ್ 6ರವರೆಗೆ ದಸರಾ ರಜಗಳ ಅಂಗವಾಗಿ ಕಾರ್ಯನಿರ್ವಹಿಸುವುದಿಲ್ಲ. ಆದರೆ ರಜಾಕಾಲದ ಪೀಠವು ತುರ್ತು ಅಥವಾ ವಿಶೇಷ ಕೇಸ್‌ಗಳನ್ನು ಮಂಗಳವಾರ ಅಥವಾ ಗುರುವಾರ ಅರ್ಹತೆಯ ಆಧಾರದ ಮೇಲೆ ಎತ್ತಿಕೊಳ್ಳುತ್ತದೆ. ಈ ನಡುವೆ ಜಯಾ ಉಪಾಹಾರಕ್ಕೆ ಪೊಂಗಲ್ , ಇಡ್ಲಿ ಸೇವಿಸಿದ್ದಾರೆ. ಜೈಲಿನಲ್ಲಿ ನೀಡಿದ್ದ ಉಪ್ಪಿಟ್ಟನ್ನು ಜಯಾ ನಿರಾಕರಿಸಿ ಮನೆಯಿಂದ ತರಿಸಲಾದ ಆಹಾರವನ್ನು ಸೇವಿಸಿದರು.

ವೆಬ್ದುನಿಯಾವನ್ನು ಓದಿ