ಕೇಂದ್ರ ರೇಲ್ವೇ ಖಾತೆ ಸಚಿವ ಸದಾನಂದ ಗೌಡರ ಪುತ್ರ ಕಾರ್ತಿಕ್ ಗೌಡ ಅವರ ಮೇಲಿನ ಅತ್ಯಾಚಾರ ಮತ್ತು ವಂಚನೆ ಪ್ರಕರಣದ ತೀವೃಗೊಳಿಸಿರುವ ಪೋಲಿಸರು ಇಂದು ಕೂಡ ವಿಚಾರಣೆಯನ್ನು ಮುಂದುವರೆಸಿದ್ದಾರೆ.
ನಿನ್ನೆ ಅವರ ವಿಚಾರಣೆ ಕೈಗೊಂಡಿದ್ದ ಎಸಿಪಿ ಓಂಕಾರಯ್ಯ ನೇತೃತ್ವದ ಪೋಲಿಸರ ತಂಡ ಇಂದು ಸಹ ವಿಚಾರಣೆ ನಡೆಸುತ್ತಿದೆ.
ಕಳೆದ ಶುಕ್ರವಾರ ಮುಂಜಾನೆ 6.15 ರ ಸುಮಾರಿಗೆ ಆರ್.ಟಿ.ನಗರ ಪೋಲಿಸ್ ಠಾಣೆಗೆ ಹಾಜರಾಗಿದ್ದ ಕಾರ್ತಿಕ್ ತಮ್ಮ ಹೇಳಿಕೆಯನ್ನು ದಾಖಲಿಸಿದ್ದರು. ವಿಚಾರಣೆ ವೇಳೆ ತನಿಖಾಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಅವರು ಸ್ಪಷ್ಟವಾಗಿ ಉತ್ತರ ನೀಡುತ್ತಿದ್ದರೆಂದು ಪೋಲಿಸ್ ಮೂಲಗಳು ತಿಳಿವೆ.
ತಮ್ಮ ಮತ್ತು ನಟಿ ನಡುವೆ ಕೇವಲ ಸ್ನೇಹ ಸಂಬಂಧವಿತ್ತು ಎಂದಿರುವ ಅವರು, ಮೈತ್ರಿಯಾ ಮಾಡಿರುವ ಆರೋಪಗಳನ್ನು ನಿರಾಕರಿಸಿದ್ದಾರೆ.
ಅಂಬೇಡ್ಕರ್ ಮೆಡಿಕಲ್ ಕಾಲೇಜಿನಲ್ಲಿ ಅವರ ವೈದ್ಯಕೀಯ ಪರೀಕ್ಷೆಯನ್ನು ಕೂಡ ನಡೆಸಲಾಗಿದೆ.
ಚಿತ್ರನಟಿ, ಮಾಡೆಲ್ ಮೈತ್ರಿಯಾ ಕಳೆದ 15 ದಿನಗಳ ಹಿಂದೆ ಕಾರ್ತೀಕ್ ಅವರ ವಿರುದ್ಧ ಅಪಹರಣ,ಅತ್ಯಾಚಾರ ಮತ್ತು ವಂಚನೆ ಪ್ರಕರಣವನ್ನು ದಾಖಲಿಸಿದ್ದು, ಇದು ತೀವೃ ವಿವಾದವನ್ನು ಸೃಷ್ಟಿಸಿದೆ.
ಬೆಂಗಳೂರಿನ ಸೆಷನ್ಸ್ ಕೋರ್ಟ್ ಕಳೆದ ಸಪ್ಟಂಬರ್ 8 ರಂದು ಡಿವಿಎಸ್ ಪುತ್ರನಿಗೆ ನಿರೀಕ್ಷಣಾ ಜಾಮೀನನ್ನು ಮಂಜೂರು ಮಾಡಿತ್ತು. ಇದರಿಂದ ಕಾರ್ತಿಕ್ ಗೌಡ ಅವರು ಬಂಧನದ ಭೀತಿಯಿಂದ ತಪ್ಪಿಸಿಕೊಂಡಿದ್ದರು.
ಠಾಣೆಗೆ ಹಾಜರಾಗುವಂತೆ ಅನೇಕ ಬಾರಿ ನೋಟಿಸ್ ಕಳುಹಿಸಿದರೂ ಹಾಜರಾಗದಿದ್ದ ಕಾರ್ತೀಕ್ ಕಳೆದ ಶುಕ್ರವಾರ ಠಾಣೆಗೆ ಹಾಜರಾಗಿ ತಮ್ಮ ಹೇಳಿಕೆಯನ್ನು ನೀಡಿದ್ದರು.