ಪತ್ನಿಯ ಅಗಲಿಕೆ ನೋವು: ಮಗಳನ್ನು ಕೊಂದು ಆತ್ಮಹತ್ಯೆ

ಮಂಗಳವಾರ, 29 ಸೆಪ್ಟಂಬರ್ 2015 (12:57 IST)
ಪತ್ನಿಯ ಅಕಾಲಿಕ ಮರಣದಿಂದ ಮಾನಸಿಕವಾಗಿ ಆಘಾತಕ್ಕೊಳಗಾಗಿದ್ದ ವ್ಯಕ್ತಿಯೊಬ್ಬ ತನ್ನ 11 ತಿಂಗಳ ಹಸುಗೂಸನ್ನು ಉಸಿರುಗಟ್ಟಿಸಿ ಸಾಯಿಸಿ ತಾನು ಕೂಡ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಬೆಂಗಳೂರಿನ ಚೌಡೇಶ್ವರಿನಗರದಲ್ಲಿ ಸೋಮವಾರ ನಡೆದಿದೆ.

ಮೃತರನ್ನು ಗುರು (28)  ಮತ್ತು ಆತನ ಮಗಳು ರಿಷಿಕಾ ಎಂದು ಗುರುತಿಸಲಾಗಿದೆ.
 
ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಗುರು ಕಳೆದ 3 ವರ್ಷದ ಹಿಂದೆ ವಿಜಯಲಕ್ಷ್ಮೀ ಎಂಬಾಕೆಯನ್ನು ಮದುವೆಯಾಗಿದ್ದು ಮಾಗಡಿಯಲ್ಲಿ ವಾಸವಾಗಿದ್ದ. ಪತಿ ಪತ್ನಿ ಅನೋನ್ಯವಾಗಿದ್ದರು. ಮಗಳಿಗೆ ಜನ್ಮ ನೀಡಿದ ಬಳಿಕ ಹೊಟ್ಟೆನೋವಿನಿಂದ ಬಳಲುತ್ತಿದ್ದ ವಿಜಯಲಕ್ಷ್ಮೀ ಚಿಕಿತ್ಸೆ ಫಲಕಾರಿಯಾಗದೆ ಒಂದು ವರ್ಷದ ಹಿಂದೆ ಮೃತಪಟ್ಟಿದ್ದರು.
 
ಭಾನುವಾರ ಮಾಗಡಿಯಲ್ಲಿ ಪತ್ನಿಯ ತಿಥಿ ಕಾರ್ಯ ಮುಗಿಸಿ, ಮಗಳೊಂದಿಗೆ ಚೌಡೇಶ್ವರಿ ನಗರದಲ್ಲಿರುವ ಅಕ್ಕನ ಮನೆಗೆ ಬಂದ ಗುರು ಮಗಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆ ಸಮಯದಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ.  ಸೋಮವಾರ ಸಂಜೆ ಆತನ ಅಕ್ಕನ ಕುಟುಂಬದವರು ಮನೆಗೆ ಹಿಂತಿರುಗಿದಾಗ ಪ್ರಕರಣ ಬೆಳಕಿಗೆ ಬೆಳಕಿಗೆ ಬಂದಿದೆ. 
 
ಹಣದ ಕೊರತೆಯಿಂದ ಪತ್ನಿಗೆ ಸೂಕ್ತ ಚಿಕಿತ್ಸೆ ಕೊಡಿಸಲಾಗಲಿಲ್ಲ, ಆಕೆಯ ಸಾವಿಗೆ ತಾನೇ ಕಾರಣ ಎಂಬ ನೋವಿನಿಂದ ಗುರು ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ