ಡಿಪೋದಲ್ಲಿ ನಿಲ್ಲಿಸಿದ್ದ ನಾಲ್ಕು ಬಸ್‌ಗಳು ಅಗ್ನಿಗಾಹುತಿ

ಗುರುವಾರ, 4 ಫೆಬ್ರವರಿ 2016 (10:21 IST)
ನಾಲ್ಕು ಬಸ್‌ಗಳು ಸುಟ್ಟು ಕರಲಾದ ಘಟನೆ ಬೆಂಗಳೂರಿನ ಮೈಸೂರು ರಸ್ತೆಯ ಕೆ.ಎಸ್.ಆರ್.ಟಿ.ಸಿ ಡಿಪೋದಲ್ಲಿ ನಡೆದಿದೆ.

ಸ್ಯಾಟ್‌ಲೈಟ್ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಡಿಪೋ ನಂಬರ್ 6ರಲ್ಲಿ  ನಸುಕಿನ ಜಾವ 3.30 ರ ಸುಮಾರಿಗೆ ಈ ಅವಘಡ ನಡೆದಿದ್ದು, ಘಟನೆಗೆ 
ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಹೇಳಲಾಗುತ್ತಿದೆ. 
 
ಒಂದು ಬಸ್‌ಗೆ ತಗಲಿದ ಬೆಂಕಿ ಹರಡುತ್ತ ನಾಲ್ಕು ಬಸ್‌ಗಳಿಗೆ ಹಬ್ಬಿದೆ. ಎರಡು ರಾಜಹಂಸ ಮತ್ತು ಎರಡು ಸಾಮಾನ್ಯ ಸಾರಿಗೆ ಬಸ್‌ಗಳು ಅಗ್ನಿಯ ಕೆನ್ನಾಲಿಗೆಗೆ ಆಹುತಿಯಾಗಿದ್ದು, 6 ಅಗ್ನಿಶಾಮಕ ವಾಹನಗಳು ಸ್ಥಳಕ್ಕಾಗಮಿಸಿ ಬೆಂಕಿಯನ್ನು ನಂದಿಸಿವೆ.
 
ಪ್ರತಿದಿನ ಬಸ್‌ನಲ್ಲಿಯೇ ಮಲಗುತ್ತಿದ್ದ ಚಾಲಕ, ನಿರ್ವಾಹಕರು ನಿನ್ನೆಯಷ್ಟೇ ಬೇರೆ ಕಡೆ ಮಲಗಿದ್ದರೆಂದು ತಿಳಿದು ಬಂದಿದೆ. ನಾಲ್ಕು ಬಸ್‌ಗಳು ಸುಟ್ಟು ಭಸ್ಮವಾಗುವವರೆಗೆ ಡಿಪೋದ ಸಿಬ್ಬಂದಿಗಳು ಏನು ಮಾಡುತ್ತಿದ್ದರು ಎಂಬ ಪ್ರಶ್ನೆ ಎದ್ದಿದೆ. 
 
ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ವೆಬ್ದುನಿಯಾವನ್ನು ಓದಿ