ಕುಮಾರಸ್ವಾಮಿ ಮಹಾನ್ ಸುಳ್ಳುಗಾರ: ಸಿದ್ದರಾಮಯ್ಯ

ಸೋಮವಾರ, 26 ಜನವರಿ 2015 (12:15 IST)
ಸುಳ್ಳುಗಾರ ಕುಮಾರಸ್ವಾಮಿ ಯಾವಾಗಲೂ ಅಸಂಬಂದ್ಧವಾದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದಕ್ಕೆ ನಾನು ಪ್ರತಿಕ್ರಿಯಿಸುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
 
ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರಿಗೆ ನನ್ನ ಮೇಲಿನ ಕೋಪ, ದ್ವೇಷ ಹೋಗಿಲ್ಲ. ಹೀಗಾಗಿ ಏನೇನೋ ಹೇಳಿಕೆ ನೀಡುತ್ತಿರುತ್ತಾರೆ ಎಂದರು. 
 
ಬೆಂಗಳೂರಿನಲ್ಲಿ ಶನಿವಾರ ನಡೆದ ಜೆಡಿಎಸ್ ಸಮಾವೇಶದಲ್ಲಿ ಸಿದ್ದರಾಮಯ್ಯ ಜೆಡಿಎಸ್‌ನಲ್ಲಿ ಹುಲಿಯಂತಿದ್ದರು, ಈಗ ಇಲಿಯಂತಾಗಿದ್ದಾರೆ ಎಂದು ಎಚ್‌ಡಿಕೆ ಟೀಕಿಸಿದ್ದರು.
 
ಅದಕ್ಕೆ ಸಿಎಂ ಈ ರೀತಿ ತಿರುಗೇಟು ನೀಡಿದರು. ನಮ್ಮ ಸರ್ಕಾರದ ಬಗ್ಗೆ ಪ್ರತಿಪಕ್ಷಗಳು ಮೃದುವಾಗಿರಬೇಕು ಅಥವಾ ಕಠೋರವಾಗಿರಬೇಕು ಎಂದು ಬಯಸಿಲ್ಲ. ಪ್ರತಿಪಕ್ಷದವರು ಅವರ ಕೆಲಸ ಮಾಡಲಿ. ಸರ್ಕಾರದ ವಿರುದ್ಧ ಪಾದಯಾತ್ರೆ, ಪ್ರತಿಭಟನೆ ಏನು ಬೇಕಾದರೂ ಮಾಡಲಿ. ನಮ್ಮ ಸರ್ಕಾರಕ್ಕಂತೂ ಅವರು ವಿರೋಧ ಎದುರಿಸುವ ಶಕ್ತಿಯಿದೆ ಎಂದು ಹೇಳಿದರು.
 
ದಿನ ನಿಗದಿ ಆಗಿಲ್ಲ: ರಾಜ್ಯ ಸಚಿವ ಸಂಪುಟದ ಪುನರ್ ರಚನೆ ಖಚಿತ, ಆದರೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಅಬಕಾರಿ ಸಚಿವ ಸತೀಶ ಜಾರಕಿಹೊಳಿ ತಮಗೆ ಬೇರೆ ಖಾತೆ ನೀಡುವಂತೆ ಬೇಡಿಕೆ ಇಟ್ಟಿರುವುದು ಗಮನಕ್ಕೆ ಬಂದಿದೆ.
 
ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ವೇಳೆ ಅವರ ಬೇಡಿಕೆ ಪರಿಗಣಿಸುತ್ತೇವೆ ಎಂದು ಸಿಎಂ ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯ ಅವರ ಪರಮಾಪ್ತರಲ್ಲಿ ಒಬ್ಬರಾದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಸಿಎಂ ಜಿಲ್ಲೆಗೆ ಬಂದಿದ್ದರೂ ಭೇಟಿಯಾಗಿಲ್ಲ. ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲು ಹೋಗಿಲ್ಲ. ಅಂಕಲಿಗಿ ಹಾಗೂ ಕುಂದರಗಿ ಕಾರ್ಯಕ್ರಮಗಳಿಂದಲೂ ದೂರ ಉಳಿದಿದ್ದರು. ಸಿಎಂ ಜತೆಗಿನ ಸಚಿವರು ಸಿಎಂ ಕಾರ್ಯಕ್ರಮಗಳಿಂದ ದೂರ ಉಳಿಯಲು ಕಾರಣ ಎಂದು ಪಕ್ಷದ ಮುಖಂಡರೊಬ್ಬರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ