ಕೇರಳದಲ್ಲಿರುವ ಜೆಡಿಎಸ್ ಸದಸ್ಯರಿಗೆ ವಾಪಸ್ ಬರಲು ಕುಮಾರಣ್ಣ ಬುಲಾವ್

ಭಾನುವಾರ, 30 ಆಗಸ್ಟ್ 2015 (17:22 IST)
ಕೇರಳದಲ್ಲಿರುವ ಜೆಡಿಎಸ್ ಬಿಬಿಎಂಪಿ ಸದಸ್ಯರಿಗೆ ವಾಪಸ್ ಬರುವಂತೆ ಜೆಡಿಎಸ್ ಮುಖಂಡ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕರೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. 
 
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ, ಕಾಂಗ್ರೆಸ್ ಪಕ್ಷದವರೊಂದಿಗೆ ನಮ್ಮ ಸದಸ್ಯರು ಇರುವುದು ಬೇಡ ನಮ್ಮ ಪಕ್ಷದವರ ಬಗ್ಗೆ ಇಲ್ಲ ಸಲ್ಲದ ಆರೋಪಗಳು ಬರುತ್ತಿರುವುದರಿಂದ ಅವರಿಗೆ ಬೆಂಗಳೂರಿಗೆ ಮರಳಲು ಹೇಳಲಾಗಿದೆ ಎಂದು ತಿಳಿಸಿದ್ದಾರೆ.
 
ಬಿಬಿಎಂಪಿ ಮೇಯರ್ ಮತ್ತು ಉಪಮೇಯರ್ ಸ್ಥಾನಕ್ಕೆ ಅಧಿಸೂಚನೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 1 ಕ್ಕೆ ನಿಗದಿಪಡಿಸಿದ್ದ ಜೆಡಿಎಸ್ ಸಭೆಯನ್ನು ಸೆಪ್ಟೆಂಬರ್ 5 ಕ್ಕೆ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.
 
ಜೆಡಿಎಸ್ ಸಭೆಯಲ್ಲಿ ಶಾಸಕರು ವಿಧಾನ ಪರಿಷತ್ ಸದಸ್ಯರು ಮತ್ತು ರಾಜ್ಯಸಭಾ ಸದಸ್ಯರು ಹಾಗೂ 14 ಪಕ್ಷದ ಕಾರ್ಪೋರೇಟರ್‌‌ಗಳು ಉಪಸ್ಥಿತರಿರುವಂತೆ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್‌.ಡಿ.ದೇವೇಗೌಡ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಡೆಯನ್ನು ನೋಡಿದ ನಂತರ ಅಂತಿಮ ತೀರ್ಮಾನಕ್ಕೆ ಬರುತ್ತೇವೆ. ಅಲ್ಲಿಯವರೆಗೆ ಕಾದು ನೋಡುವ ತಂತ್ರ ಅನುಸರಿಸುವುದಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ