ಸಾಲಬಾಧೆ: ಉರಿಯುತ್ತಿದ್ದ ಕಬ್ಬಿನ ಗದ್ದೆಗೆ ಹಾರಿ ರೈತ ಆತ್ಮಹತ್ಯೆ

ಗುರುವಾರ, 25 ಜೂನ್ 2015 (13:41 IST)
ಸಾಲಬಾಧೆ ತಾಳಲಾರದೆ ರೈತನೋರ್ವ ತನ್ನ ಕಬ್ಬಿನ ಗದ್ದೆಗೆ ಬೆಂಕಿ ಹಚ್ಚಿ ಅದರೊಳಗೇ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಜಿಲ್ಲೆಯ ಪಾಂಡವಪುರ ತಾಲೂಕಿನ ಗಾಣದಹೊಸೂರು ಎಂಬ ಗ್ರಾಮದಲ್ಲಿ ಇಂದು ನಡೆದಿದೆ. 
 
ಮೃತ ರೈತನನ್ನು ನಿಂಗೇಗೌಡ(50) ಎಂದು ಹೇಳಲಾಗಿದ್ದು, ಆತ್ಮಹತ್ಯೆ ಮಾಡಿಕೊಂಡ ದುರ್ಧೈವಿಯಾಗಿದ್ದಾನೆ. 
 
ಗ್ರಾಮಸ್ಥರ ಪ್ರಕಾರ, ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತನಿಗೆ ಕೇವಲ ಅರ್ಧ ಎಕರೆ ಜಮೀನಿತ್ತು. ಅಲ್ಲದೆ ಇವರ ಮಗ ಈರೇಗೌಡ ವಿಕಲಚೇತನರಾಗಿದ್ದು, ಕುಟುಂಬದಲ್ಲಿ ತೀವ್ರ ಕಷ್ಟವನ್ನು ಎದುರಿಸುತ್ತಿದ್ದರು. ಈ ನಡುವೆ ಒಂದೂವರೆ ಲಕ್ಷಕ್ಕೂ ಅಧಿಕ ಸಾಲ ಇತ್ತು. ಇದರಿಂದ ಸಾಲಬಾಧೆ ತಾಳಲಾರದೆ ಮನನೊಂದು ನಿಂಗೇಗೌಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದಾಗಿ ತಿಳಿಸಿದ್ದಾರೆ.  
 
ಘಟನಾ ಸ್ಥಳಕ್ಕೆ ತಾಲೂಕಿನ ಸಹಾಯಕ ಆಯುಕ್ತ ನಾಗರಾಜು ಹಾಗೂ ತಹಶಿಲ್ದಾರ್ ಭೇಟಿ ನೀಡಿ 
ಪರಿಶೀಲಿಸಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದಾರೆ. ಈ ಸಂಬಂಧ ಪಾಂಡವಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ