ರಾಜ್ಯದ ನಾಲ್ಕು ಕಡೆ ಲೋಕಾಯುಕ್ತ ದಾಳಿ: ಕಡತಗಳ ಪರಿಶೀಲನೆ

ಶನಿವಾರ, 20 ಡಿಸೆಂಬರ್ 2014 (13:24 IST)
ರಾಜ್ಯದ ಹಲವು ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉನ್ನತ ಅಧಿಕಾರಿಗಳ ನಿವಾಸಗಳ ಮೇಲೆ ಕಣ್ಣಿಟ್ಟಿರುವ ಲೋಕಾಯುಕ್ತ ಪೊಲೀಸರು, ಏಕಕಾಲಕ್ಕೆ ರಾಜ್ಯದ ನಾಲ್ಕು ಕಡೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. 
 
ಲೋಕಾಯುಕ್ತ ಎಸ್‌ಪಿ ವೇದಮೂರ್ತಿ ನೇತೃತ್ವದಲ್ಲಿ ಹಾಸನ ಜಿಲ್ಲೆಯ ಆಹಾರ ನಿರೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ದೊರೆಸ್ವಾಮಿ ಅವರ ನಗರದ ವಿದ್ಯಾನಗರ ನಿವಾಸದ ಮೇಲೆ ದಾಳಿ ನಡೆಸಿ ಕಡತಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. 
 
ಬೀದರ್ ಜಿಲ್ಲೆಯ ಎಸ್‌ಪಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಅಶೋಕ್ ಪಾಟೀಲ್ ಅವರ ನಿವಾಸದ ಮೇಲೂ ದಾಳಿ ನಡೆಸಿರುವ ಪೊಲೀಸರು, ಅವರ ನಗರದ ಎಲ್ಐಸಿ ಕಾಲೋನಿಯಲ್ಲಿನ ನಿವಾಸ, ಆಂಧ್ರದ ಮೆಹಬೂಬ್ ನಗರ ಜಿಲ್ಲೆಯ ಚಿಣಗಿಪಲ್ಲಿಯಲ್ಲಿನ ತೋಟದ ಮನೆ, ಬಸವ ಕಲ್ಯಾಣ ತಾಲೂಕಿನ ಕಂಡಾಳ ಗ್ರಾಮದಲ್ಲಿನ ನಿವಾಸ ಹಾಗೂ ಬಾಲ್ಕಿಯ ಸಿದ್ದೇಶ್ವರನಗರದ ನಿವಾಸದ ಮೇಲೆ ಲೋಕಾಯುಕ್ತ ಎಸ್‌ಪಿ ಎಂ.ಬಿ.ಪಾಟೀಲ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.  
 
ಇನ್ನು ಮೈಸೂರಿನಲ್ಲಿಯೂ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು, ಶ್ರೀರಂಗ ಪಟ್ಟಣದ ಕಂದಾಯ ನಿರೀಕ್ಷಕ ದೊಡ್ಡಯ್ಯ ಅವರ ಮೈಸೂರಿನ ಬೊಗಾದಿ ನಿವಾಸದ ಮೇಲೆ ಎಸ್‌ಪಿ ನಾರಾಯಣಸ್ವಾಮಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. 
 
ಶಿವಮೊಗ್ಗ ಜಿಲ್ಲೆಯ ಭದ್ರವತಿ ತಾಲೂಕಿನ ಸರ್ಕಾರಿ ಎಂಪಿಎಂ ಕಾರ್ಖಾನೆಯಲ್ಲಿ ಸಹಾಯಕ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ಜಿ.ವಿ.ನಂಜಯ್ಯ ಅವರ ನಿವಾಸದ ಮೇಲೆ ಇನ್‌ಸ್ಪೆಕ್ಟರ್ ರುದ್ರೇಶ್ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ದಾಖಲೆಗಳ ಪರಿಶೀಲನೆ ಪ್ರಗತಿಯಲ್ಲಿದೆ.  

ವೆಬ್ದುನಿಯಾವನ್ನು ಓದಿ