ವಿಶೇಷ ಲೋಕಾಯುಕ್ತ ಕೋರ್ಟ್ ವಿಚಾರಣೆ ನಡೆಸುತ್ತಿದ್ದು, ಈ ವೇಳೆ ಆರೋಪಿ ರಿಯಾಜ್ ತನಿಖೆಗೆ ಸೂಕ್ತವಾಗಿ ಸ್ಪಂಧಿಸುತ್ತಿಲ್ಲ. ಆದ್ದರಿಂದ ಆತನನ್ನು ಮತ್ತೊಮ್ಮೆ ತಮ್ಮ ವಶಕ್ಕೆ ನೀಡಿ ಎಂದು ಎಸ್ಐಟಿ ಪರ ವಕೀಲರು ನ್ಯಾಯಾಧೀಶರಲ್ಲಿ ಮನವಿ ಮಾಡಿದರು. ಆದರೆ ಇದಕ್ಕೆ ಪ್ರತಿಯಾಗಿ ಪ್ರತಿಕ್ರಿಯಿಸಿದ ಆಱೋಪಿ, ನಾನು ಸೂಕ್ತವಾಗಿಯೇ ಸ್ಪಂಧಿಸುತ್ತಿದ್ದೇನೆ. ಆದರೆ ನನ್ನ ಮೇಲೆ ನಾಲ್ಕು ಡಜನ್ ಕೇಸು ದಾಖಲಿಸಿರುವುದಾಗಿ ಅಧಿಕಾರಿಗಳು ಹೆದರಿಸುತ್ತಿದ್ದಾರೆ. ಈ ನಡುವೆ ನನಗೆ ಆರೋಗ್ಯವೂ ಸರಿಯಿಲ್ಲ. ಇದರಿಂದ ನಾನು ಕಳೆದ ನಾಲ್ಕೈದು ದಿನಗಳಿಂದ ನಿದ್ರೆಯೂ ಇಲ್ಲದೆ, ಊಟವನ್ನೂ ಸೇವಿಸದೆ ಬಳಲುತ್ತಿದ್ದೇನೆ. ಈ ಹಿನ್ನೆಲೆಯಲ್ಲಿ ನನಗೆ ಜಾಮೀನು ಮಂಜೂರು ಮಾಡಿ ಎಂದು ಮನವಿ ಮಾಡಿದ ರಿಯಾಜ್, ಅಧಿಕಾರಿಗಳು ನನ್ನನ್ನು ಉಗ್ರನಂತೆ ನೋಡುತ್ತಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಎಸ್ಐಟಿ ಅಧಿಕಾರಿಗಳ ಪರ ವಕೀಲರು, ಆಕ್ಷೇಪ ವ್ಯಕ್ತಪಡಿಸಿದ್ದರು. ವಿಚಾರಣೆ ಮುಗಿದ ಬಳಿಕ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಿ ಆದೇಶಿಸಲಾಯಿತು. .
ಇನ್ನು ಒಂದು ಕೋಟಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿ ಲೋಕಾಯುಕ್ತ ಇಲಾಖೆಯಲ್ಲಿ ದಾಖಲಿಸಿಲಾಗಿದ್ದ ಪ್ರಕರಣದಲ್ಲಿ ಸಯ್ಯದ್ ರಿಯಾಜ್ ಪ್ರಮುಖ ಆರೋಪಿಯಾಗಿದ್ದಾರೆ ಎಂಬ ಕಾರಣ ಹಿನ್ನೆಲೆಯಲ್ಲಿ ಈತನನ್ನು ಎಸ್ಐಟಿ ಅಧಿಕಾರಿಗಳು ಕಳೆದ ಜುಲೈ 27ರಂದು ಬಂಧಿಸಿದ್ದರು. ಅಲ್ಲದೆ ಕೋರ್ಟ್ಗೆ ಹಾಜರು ಪಡಿಸಿ ತಮ್ಮ ವಶಕ್ಕೆ ಪಡೆದಿದ್ದರು. ಆದರೆ ಬಂಧನದ ಅವಧಿ ಇಂದಿಗೆ ಮುಗಿದಿರುವ ಹಿನ್ನೆಲೆಯಲ್ಲಿ ಇಂದು ಮತ್ತೆ ಕೋರ್ಟ್ಗೆ ಹಾಜರುಪಡಿಸಿದ್ದಾರೆ.