ಲಾಟರಿ ಪ್ರಕರಣ: ನಮ್ಮ ವಿರುದ್ಧ ನಮ್ಮದೇ ಅಧಿಕಾರಿಗಳು ಹೆಣೆದಿರುವ ಷಡ್ಯಂತ್ರ ಎಂದ ಎಡಿಸಿಪಿ ಅಲೋಕ್ ಕುಮಾರ್

ಶನಿವಾರ, 23 ಮೇ 2015 (15:58 IST)
ಒಂದಂಕಿ ಲಾಟರಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರು ಪ್ರತಿಕ್ರಿಯಿಸಿದ್ದು, ನಮ್ಮ ಇಲಾಖೆಯ ಅಧಿಕಾರಿಗಳೇ ನನ್ನ ವಿರುದ್ಧ ಷಡ್ಯಂತ್ರ ರೂಪಿಸುತ್ತಿದ್ದು, ನಾನು ಯಾವುದೇ ತನಿಖೆಗೆ ಸಿದ್ಧನಿದ್ದೇನೆ. ನಿಸ್ಪಕ್ಷಪಾತವಾಗಿ ತನಿಖೆ ನಡೆಯಲಿ ಎಂದಿದ್ದಾರೆ. 
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಕಱಣದಲ್ಲಿ ಕಿಂಗ್ ಪಿನ್ ಆಗಿ ಕಾಣಿಸಿಕೊಂಡು ಪ್ರಮುಖ ಆರೋಪಿಯಾಗಿರುವ ಪರಿರಾಜನ್ ನನ್ನ ಹಿತೈಷಿಯಾಗಿದ್ದ. ಈ ಹಿನ್ನೆಲೆಯಲ್ಲಿ ಅವರ ಹಾಗೂ ನನ್ನ ನಡುವೆ ಸ್ನೇಹವಿತ್ತು. ಆಧರೆ ಆತ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂಬ ಬಗ್ಗೆ ನನಗೆ ತಿಳಿದಿರಲಿಲ್ಲ. ಈ ಹಿನ್ನೆಲೆಯಲ್ಲಿ ನನ್ನ ಹಾಗೂ ಆತನ ನಡುವೆ ಸ್ನೇಹ ಮುಂದುವರಿದಿತ್ತು. ಆದರೆ ನನಗೆ ಆತ ಲಾಟರಿಯಲ್ಲಿ ಭಾಗಿಯಾಗಿದ್ದಾನೆ ಎಂಬ ಬಗ್ಗೆ ಮಾಹಿತಿಯೇ ಇರಲಿಲ್ಲ. ಒಂದು ವೇಳೆ ಇದ್ದಿದ್ದರೆ ನಾನೇಕೆ ಆತನೊಂದಿ ದೂರವಾಣಿ ಸಂಪರ್ಕ ಸಾಧಿಸುತ್ತಿದ್ದೆ ಎಂದಿರುವ ಅವರು, ನಾನು ಯಾವುದೇ ತನಿಖೆಗೆ ಸಿದ್ದನಿದ್ದೇನೆ ಎಂದರು. 
 
ಇದೇ ವೇಳೆ, ನಮ್ಮ ಇಲಾಖೆಯಲ್ಲಿಯೇ ಇರುವ ಕೆಲ ಅಧಿಕಾರಿಗಳು ನನ್ನ ವಿರುದ್ಧ ಹೂಡಿರುವ ಷಡ್ಯಂತ್ರವಿದು ಎಂದಿರುವ ಅವರು, ನಾನು ರಾಜನ್‌ನನ್ನು ಬಂಧಿಸಬೇಡಿ ಎಂದು ನಮ್ಮ ಇಲಾಖೆಯ ಯಾರೊಬ್ಬ ಅಧಿಕಾರಿಗೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.  
 
ಲಾಟರಿ ಹಾಗೂ ಮಟ್ಕಾ ಪ್ರಕರಣಗಳಲ್ಲಿ ಪೊಲೀಸರು ಸೇರಿದ್ದಾರೆ ಎಂದು ಸಿಐಡಿ ಅಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಆಯುಕ್ತ ಅಲೋಕ್ ಕುಮಾರ್ ಈ ರೀತಿಯಾಗಿ ಉತ್ತರಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ