ಮದುವೆಯಾಗುತ್ತೇನೆಂದು ನಂಬಿಸಿದ, ಹಣಕ್ಕಾಗಿ ಬೆಂಕಿ ಹಚ್ಚಿ ಕೊಂದ

ಬುಧವಾರ, 27 ಆಗಸ್ಟ್ 2014 (11:56 IST)
ಪ್ರೇಯಸಿ ಹಣ ಕೊಡಲು ನಿರಾಕರಿಸಿದ್ದಕ್ಕೆ ಕೋಪಗೊಂಡ ಪ್ರೇಮಿಯೊಬ್ಬ ಆಕೆಯ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ ಘಟನೆ ರಾಯಚೂರಿನಲ್ಲಿ ನಡೆದಿದೆ.
 
ಆರೋಪಿಯನ್ನು ಮನ್ಸೂರ್ ಅಲಿ ಖಾನ್ ಎಂದು ಗುರುತಿಸಲಾಗಿದ್ದು, ಆತ ನಾಝಿಯಾ ಬೇಗಂ ಎಂಬ ವಿವಾಹಿತೆಯನ್ನು ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದನಲ್ಲದೇ, ತಾನು ನಿನ್ನನ್ನು ಮದುವೆಯಾಗುತ್ತೇನೆ ಎಂದು ನಂಬಿಸಿ ಆಕೆಯ ಗಂಡನಿಂದ ವಿಚ್ಛೇದನವನ್ನು ಸಹ ಕೊಡಿಸಿದ್ದ.

ಆದರೆ ಇತ್ತೀಚಿಗೆ ಹಣ ನೀಡುವಂತೆ ಆಕೆಯನ್ನು ಸದಾ ಪೀಡಿಸುತ್ತಿದ್ದ. ಎಂದಿನಂತೆ ನಿನ್ನೆ ಕೂಡ ಆಕೆ ಬಳಿ ಹಣ ಕೇಳಿದಾಗ ಆಕೆ ಕೊಡಲು ನಿರಾಕರಿಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಆತ ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಅಲ್ಲಿಂದ ಪರಾರಿಯಾಗಿದ್ದಾನೆ.
 
ಬೆಂಕಿಯ ಕೆನ್ನಾಲಿಗೆಯಲ್ಲಿ ಬೇಯುತ್ತಿದ್ದ ಆಕೆ ಸಹಾಯಕ್ಕಾಗಿ ಕೂಗಿಕೊಂಡಾಗ ರಸ್ತೆಯಲ್ಲಿದ್ದ ಆಟೋ ಚಾಲಕರು ಧಾವಿಸಿ ಬಂದು ಆಕೆಗೆ ಹತ್ತಿದ್ದ ಬೆಂಕಿಯನ್ನು  ನಂದಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ದೇಹ ಸಂಪೂರ್ಣವಾಗಿ ಸುಟ್ಟಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾಳೆ ಎಂದು ತಿಳಿದು ಬಂದಿದೆ.
 
ಈ ಕುರಿತು  ಸದರ್ ಬಜಾರ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲಿಸರು ತನಿಖೆ ನಡೆಸುತ್ತಿದ್ದಾರೆ. 
 
ಮೃತ ದುರ್ದೈವಿಗೆ 14 ವರ್ಷದ ಮಗಳು ಮತ್ತು 10 ವರ್ಷದ ಮಗನಿದ್ದು, ಇತ್ತ ತಾಯಿಯೂ ಇಲ್ಲದೆ,  ಅತ್ತ ತಂದೆಯ ಆಸರೆಯೂ ಇಲ್ಲದೇ ಮಕ್ಕಳು ಅನಾಥರಾಗಿದ್ದಾರೆ. 

ವೆಬ್ದುನಿಯಾವನ್ನು ಓದಿ