ಮಹದಾಯಿ ಪ್ರಕರಣ ನ್ಯಾಯಾಧೀಕರಣದ ಮುಂದೆ ಇರುವಾಗ ಮಾತುಕತೆ ಬೇಡ ಎಂದು ಗೋವಾ ಮುಖ್ಯಮಂತ್ರಿ ಲಕ್ಷ್ಮೀಕಾಂತ ಪರ್ಸೇಕರ್ ಪತ್ರ ಬರೆದಿರುವ ಕುರಿತು ಪ್ರತಿಕ್ರಿಯಿಸಿದ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್, ಪ್ರತಿಪಕ್ಷದ ನಿಯೋಗ ಭೇಟಿಗೆ ಗೋವಾ ಸಿಎಂ ಅವಕಾಶ ನೀಡದಿರುವುದು ದುರದೃಷ್ಟಕರ. ಸೌಜನ್ಯಕ್ಕಾದರೂ ಭೇಟಿಗೆ ಅವಕಾಶ ಕೊಡಬೇಕಿತ್ತು ಎಂದು ಹೇಳಿದ್ದಾರೆ.
ಉಮಾಭಾರತಿ ಪತ್ರ ಬರೆದು ಮಾತುಕತೆಗೆ ನಿರಾಕರಿಸಿರುವುದು ದುರದೃಷ್ಟಕರ, ಉಮಾಭಾರತಿ ಮತ್ತು ಪ್ರಧಾನಿ ಮೋದಿ ಇಬ್ಬರೂ ಜನರ ಕಣ್ಣಿಗೆ ಮಣ್ಣೆರಚಿದ್ದಾರೆ ಎಂದು ಆರೋಪಿಸಿದರು. ಶೀಘ್ರವೇ ಸಿಎಂ ಸಿದ್ದರಾಮಯ್ಯ ಅವರ ಜತೆ ಸಭೆ ನಡೆಸುತ್ತೇವೆ. ಬಳಿಕ ಪ್ರಧಾನಿ ಮೋದಿಗೆ ಪತ್ರ ಬರೆಯುತ್ತೇನೆ ಎಂದು ಪಾಟೀಲ ಹೇಳಿದರು.
ಮಹದಾಯಿ ಯೋಜನೆ ಜಾರಿಗೆ ಕುರಿತು ಕಳೆದ 200 ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ. ಗೋವಾ, ಮಹಾರಾಷ್ಟ್ರ , ಕೇಂದ್ರದಲ್ಲಿ ಬಿಜೆಪಿ ಅಧಿಕಾರ ನಡೆಸುತ್ತಿದೆ. ಪ್ರಧಾನ ಮಂತ್ರಿ ಅಲ್ಲಿನ ಮುಖ್ಯಮಂತ್ರಿಗಳ ಜತೆ ಮಾತುಕತೆಯಾಡಿ ಪರಿಹಾರ ಕಂಡುಹಿಡಿಯಲಿ ಎಂದು ಪಾಟೀಲ್ ಒತ್ತಾಯಿಸಿದರು.