ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ ಮಹಾರಾಷ್ಟ್ರ ಉದ್ಯಮಿಗಳು

ಬುಧವಾರ, 17 ಡಿಸೆಂಬರ್ 2014 (08:33 IST)
ಇಂದು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಹಾರಾಷ್ಟ್ರದ ಹಲವು ಉದ್ಯಮಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದು, ರಾಜ್ಯದಲ್ಲಿ ಕಾರ್ಖಾನೆ ಸ್ಥಾಪನೆ ಹಾಗೂ ಉದ್ಯೋಗ ಸೃಷ್ಠಿ ಸಂಬಂಧ ಮಾತುಕತೆ ನಡೆಸಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ. 
 
ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಯಮಿಗಳೊಂದಿಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು ಎನ್ನಲಾಗಿದ್ದು, ಉದ್ಯಮ ಸ್ಥಾಪನೆಗೆ ಸಂಬಂಧಿಸಿದಂತೆ ಸರ್ಕಾರ ಎಲ್ಲಾ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಸಿದ್ಧವಿದೆ. ಆದರೆ ಇಲ್ಲಿ ಸ್ಥಾಪನೆಯಾಗುವ ನಿಮ್ಮ ಘಟಕಕ್ಕೆ ನಿಮ್ಮ ಕಂಪನಿಯು ಎಷ್ಟು ಬಂಡವಾಳ ಹೂಡಲು ಸಿದ್ಧವಿದೆ, ಅದರಿಂದ ಎಷ್ಟು ಉದ್ಯೋಗಗಳು ಸೃಷ್ಟಿಯಾಗಲಿವೆ, ಅಲ್ಲದೆ ಎಷ್ಟು ಭೂಮಿ ಅಗತ್ಯವಿದೆ ಎಂಬ ವಿಚಾರಗಳನ್ನೂ ಒಳಗೊಂತೆ ಇತರೆ ಎಲ್ಲಾ ಸವಿವರ ಮಾಹಿತಿಗಳೊಂದಿಗೆ ಮತ್ತೊಮ್ಮೆ ಭೇಟಿ ಮಾಡಿ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. 
 
ಇನ್ನು ಇದೇ ವೇಳೆ ಪ್ರತಿಕ್ರಿಯಿಸಿದ ಉದ್ಯಮಿಗಳು, ಮಹಾರಾಷ್ಟ್ರದ 1600ಕ್ಕೂ ಹೆಚ್ಚು ಉದ್ಯಮಿಗಳು ಕರ್ನಾಟಕದಲ್ಲಿ ಉದ್ಯಮಗಳ ಸ್ಥಾಪನೆಗೆ ಆಸಕ್ತಿ ತೋರುತ್ತಿದ್ದು, ಸರ್ಕಾರ ಅಗತ್ಯವೆನಿಸಿದ ವಿದ್ಯುತ್, ನೀರು, ಭೂಮಿ ಸೇರಿದಂತೆ ಇತರೆ ಮೂಲ ಸೌಲಭ್ಯಗಳನ್ನು ಒದಗಿಸಿದಲ್ಲಿ ಸಾಕಷ್ಟು ಬಂಡವಾಳ ಹೂಡಲು ಸಿದ್ಧವಾಗಿದ್ದಾರೆ ಎಂದು ಸಿಎಂ ಗಮನಕ್ಕೆ ತಂದರು ಎನ್ನಲಾಗಿದೆ. 

ವೆಬ್ದುನಿಯಾವನ್ನು ಓದಿ