ಅನೈತಿಕ ಸಂಬಂಧ: ಪತ್ನಿ, ಪುತ್ರಿಯನ್ನು ಹತ್ಯೆಗೈದು ಪೊಲೀಸ್ ಠಾಣೆಗೆ ಶರಣಾದ ಆರೋಪಿ

ಮಂಗಳವಾರ, 16 ಸೆಪ್ಟಂಬರ್ 2014 (14:33 IST)
ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ಆಕೆಯನ್ನು ಹತ್ಯೆ ಮಾಡಿದ್ದಲ್ಲದೇ ಪುತ್ರಿಯನ್ನು ಕೂಡಾ ಹತ್ಯೆ ಮಾಡಿದ 35 ವರ್ಷ ವಯಸ್ಸಿನ ವ್ಯಕ್ತಿಯೊಬ್ಬ ಪೊಲೀಸ್ ಠಾಣೆಗೆ ಬಂದು ಶರಣಾದ ಘಟನೆ ನಗರದ ರಾಜಾಜಿನಗರ ಬಡಾವಣೆಯಲ್ಲಿ ನಡೆದಿದೆ.     
 
ನಾನು ಪತ್ನಿ ಮತ್ತು ಪುತ್ರಿಯನ್ನು ಹತ್ಯೆ ಮಾಡಿದ್ದೇನೆ. ನಾನು ಜೈಲಿಗೆ ಹೋದಾಗ ಪೋಲಿಯೋದಿಂದ ಬಳಲುತ್ತಿರುವ ಪುತ್ರಿಯನ್ನು ನೋಡಿಕೊಳ್ಳುವವರು .ಯಾರು ಎನ್ನುವ ಆತಂಕದಿಂದ ನಾನು ಆಕೆಯನ್ನೂ ಕೊಲೆ ಮಾಡಿದ್ದೇನೆ ಎಂದು ಟೇಲರ್ ವೃತ್ತಿಯಲ್ಲಿರುವ ಆರೋಪಿ ಕುಮಾರ್ ನಾಯಕ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
 
ರಾಜಾಜಿನಗರದ ಐದನೇ ಬ್ಲಾಕ್‌ನಲ್ಲಿರುವ ಆರೋಪಿಯ ಮನೆಗೆ ಬಂದ ಪೊಲೀಸರಿಗೆ ಆರೋಪಿಯ ಪತ್ನಿ ಮಂಜುಳಾ ಮತ್ತು ಪುತ್ರಿ ಹರ್ಷಿತಾ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. 
 
ಪತ್ನಿ ಮತ್ತು ಪುತ್ರಿಯ ಹತ್ಯೆ ಮಾಡಬೇಕು ಎನ್ನುವ ಉದ್ದೇಶದಿಂದ ತನ್ನ ಮತ್ತೊಬ್ಬ ಪುತ್ರನನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟು ಬಂದಿದ್ದಾನೆ.
 
10 ವರ್ಷಗಳ ಹಿಂದೆ ನಮ್ಮ ಮದುವೆಯಾಗಿತ್ತು. ಮಾಗಡಿ ತಾಲೂಕಿನ ಹುಣಸೇಕೊಪ್ಪ ಗ್ರಾಮದಲ್ಲಿ ವಾಸವಾಗಿದ್ದೆವು. ಆರಂಭದಿಂದಲು ಪತ್ನಿ ಮಂಜುಳಾ ನಡತೆ ಸರಿಯಾಗಿರಲಿಲ್ಲ. ಪ್ರತಿದಿನ ಆಕೆ ಬೇರೆ ವ್ಯಕ್ತಿಗಳೊಂದಿಗೆ ಸಂಬಂಧ ಹೊಂದಿದ್ದಾಳೆ ಎನ್ನುವ ಸುದ್ದಿಗಳು ನನಗೆ ಕೇಳಿಬರುತ್ತಿದ್ದವು. ಆದ್ದರಿಂದ ಬೇಸತ್ತ ನಾನು ಕಳೆದ 2009ರಲ್ಲಿ ಬೆಂಗಳೂರಿಗೆ ವಾಸದ ಮನೆಯನ್ನು ಬದಲಾಯಿಸಿದೆ. ಬೆಂಗಳೂರಿಗೆ ಬಂದ ನಂತರವು ಆಕೆ ಇತರ ಪುರುಷರೊಂದಿಗೆ ಸಂಬಂಧ ಮುಂದುವರಿಸಿದ್ದಳು. ಆದ್ದರಿಂದ ಆಕೆಯನ್ನು ಹತ್ಯೆ ಮಾಡಿದ್ದಾನೆ ಎಂದು ಆರೋಪಿ ಕುಮಾರ್ ನಾಯಕ್ ಪೊಲೀಸರಿಗೆ ತಿಳಿಸಿದ್ದಾನೆ. 
 
ಆರೋಪಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ಹತ್ಯಾ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ