ಮಂಡ್ಯ ನಗರಸಭೆ ಬಿಕ್ಕಟ್ಟು: ಹೆಚ್‌ಡಿಕೆಯನ್ನು ಭೇಟಿಯಾದ ಸದಸ್ಯರು

ಸೋಮವಾರ, 30 ಮಾರ್ಚ್ 2015 (17:01 IST)
ಮಂಡ್ಯ ನಗರಸಭೆಯ ಬಿಕ್ಕಟ್ಟನ್ನು ಶಮನಗೊಳಿಸುವ ಹಿನ್ನೆಲೆಯಲ್ಲಿ ನಗರಸಭೆಯ ಜೆಡಿಎಸ್‌ನ ಕೆಲ ಸದಸ್ಯರು ಇಂದು ತಮ್ಮ ನಾಯಕ, ಜೆಡಿಎಲ್‌ಪಿ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. 
 
ಭೇಟಿ ಹಿನ್ನೆಲೆಯಲ್ಲಿಯೇ ರಾಜಧಾನಿಗೆ ಬಂದಿದ್ದ ಸದಸ್ಯರು, ಸಭೆಯಲ್ಲಿ ಸೇವಾ ಅವಧಿ ಮುಗಿದಿದ್ದರೂ ಕೂಡ ಸದಸ್ಯ ಸಿದ್ದರಾಜು ಅವರು ನಗರಸಭಾಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುತ್ತಿದ್ದಾರೆ. ಆದ್ದರಿಂದ ಅವರನ್ನು ಕೆಳಗಿಳಿಸಲೇ ಬೇಕು ಎಂಬ ಬೇಡಿಯನ್ನಿಟ್ಟರು. ಈ ಹಿನ್ನೆಲೆಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸುವ ಅಗತ್ಯವಿದೆ ಎಂದು ಸಮಾಲೋಚಿಸಿದರು.  
 
ಇಂದು ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಈ ಭೇಟಿ ಮಾತುಕತೆಯಲ್ಲಿ ಅಂತಿಮವಾಗಿ ನಾಳೆ ನಡೆಯುವ ಬಜೆಟ್ ಅದಿವೇಶನಕ್ಕೆ ಎಲ್ಲಾ ಜೆಡಿಎಸ್ ಸದಸ್ಯರೂ ಕೂಡ ಗೈರಾಗಲು ನಿರ್ಧರಿಸಯಿತು. ನಗರಸಭೆಯಲ್ಲಿ ಜೆಡಿಎಸ್ 17 ಮಂದಿ ಸದಸ್ಯ ಬಲವನ್ನು ಹೊಂದಿದೆ.  
 
ಇನ್ನು ಈ ಸಭೆಯಲ್ಲಿ ನಾಗಮಂಗಲ ಶಾಸಕ ಚೆಲುವರಾಯಸ್ವಾಮಿ ಹಾಗೂ ಅಂಬರೀಶ್ ಆಪ್ತ, ಕಾಂಗ್ರೆಸ್ ಮುಖಂಡ ಅಮರಾವತಿ ಚಂದ್ರಶೇಖರ್ ಅವರೂ ಭಾಗವಹಿಸಿದ್ದರು. ಅಲ್ಲದೆ ಸಮಾಲೋಚನಾ ವೇಳೆಯಲ್ಲಿ ಸಚಿವ ಅಂಬರೀಶ್ ಕೂಡ ದೂರವಾಣಿ ಮೂಲಕ ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿದ್ದು, ಜೆಡಿಎಸ್ ಬೆಂಬಲಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. 
 
ಜಿಲ್ಲಾ ಕಾಂಗ್ರೆಸ್‌ನಲ್ಲಿ ವೈಮನಸ್ಸು ಬೇರೂರಿದ್ದು, ಅಂಬರೀಶ್ ಬೆಂಬಲಿಗರು ಒಂದು ಬಣದಲ್ಲಿದ್ದರೆ ಮತ್ತೊಂದು ಜಿಲ್ಲಾಧ್ಯಕ್ಷರ ಬಣವಾಗಿದೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್‌ನಲ್ಲಿಯೂ ಕೂಡ ಒಮ್ಮತವಿಲ್ಲ. ಆದ್ದರಿಂದ ಸಭಾಧ್ಯಕ್ಷರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಸಾಧ್ಯವಾಗುತ್ತಿಲ್ಲ. ಆದರೆ ಜೆಡಿಎಸ್‌ನಲ್ಲಿ 17 ಸದಸ್ಯರ ಬಂಬಲವಿರುವ ಕಾರಣ ಕಾಂಗ್ರೆಸ್‌ನೊಂದಿಗೆ ಸೇರಿ ಅವಿಶ್ವಾಸ ನಿರ್ಣಯ ಮಂಡಿಸಲು ಯತ್ನಿಸುತ್ತಿದೆ.  
 
ಪ್ರಸ್ತುತ ನಗರಸಭಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಸಿದ್ದರಾಜು ಅವರನ್ನು 15 ತಿಂಗಳ ಅಧಿಕಾರಾವಧಿಗೆ ನೇಮಕಗೊಳಿಸಲಾಗಿತ್ತು. ಆದರೆ ಆ ಅವಧಿ ಪ್ರಸ್ತುತ ಮುಗಿದಿದ್ದರೂ ಕೂಡ ಅವರೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುತ್ತಿದ್ದಾರೆ. ಅಧ್ಯಕ್ಷರ ಈ ವೈಖರಿ ಸದಸ್ಯರನ್ನು ಕೆರಳಿಸಿದೆ. 

ವೆಬ್ದುನಿಯಾವನ್ನು ಓದಿ