ಪೂರ್ವ ನಿಗದಿಯಂತೆ ನಗರದ ಉತ್ತರಹಳ್ಳಿ ಬಳಿಯ ವೆಂಕಟಾದ್ರಿ ಕಲ್ಯಾಣ ಮಂಟಪದಲ್ಲಿ 17 ವರ್ಷದ ಅಪ್ರಾಪ್ತ ಬಾಲಕಿಯೋರ್ವಳಿಗೆ 27 ವರ್ಷದ ಮಹೇಶ್ ಎಂಬ ಯುವಕನೊಂದಿಗೆ ಮದುವೆ ನಡೆಯುತ್ತಿತ್ತು. ನಿನ್ನೆ ಆರತಕ್ಷತೆ ನಡೆಯುತ್ತಿದೆ ಎಂಬ ಬಗ್ಗೆ ಮಾಹಿತಿ ತಿಳಿದು ಬಂದ ಹಿನ್ನೆಲೆಯಲ್ಲಿ ಡಾನ್ ಬೋಸ್ಕೋ ಸಂಸ್ಥೆಯ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಅಪ್ರಾಪ್ತ ಬಾಲಕಿಗೆ ನಡೆಯುತ್ತಿದ್ದ ಮದುವೆಯನ್ನು ತಪ್ಪಿಸಿದ್ದಾರೆ.
ಮೂಲಗಳ ಪ್ರಕಾರ, ಬಾಲಕಿಯ ಪೋಷಕರು ನಮ್ಮ ಮಗಳಿಗೆ 18 ವರ್ಷ ತುಂಬಿದೆ ಎಂದು ಹೇಳಿಕೆ ನೀಡುವ ಮೂಲಕ ವಾದಿಸಿದರು ಎನ್ನಲಾಗಿದೆ. ಆದರೂ ಬಾಲಕಿಯನ್ನು ವಶಕ್ಕೆ ಪಡೆದ ಸಂಸ್ಥೆಯ ಸದಸ್ಯರು, ಬಳಿಕ ಆಕೆಯನ್ನು ಬಾಲ ಮಂದಿರಕ್ಕೆ ಹಸ್ತಾಂತರಿಸಿ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ.