ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡು ಸರ್ಕಾರದ ಧೋರಣೆ ಖಂಡಿಸಿ ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಬೆಂಗಳೂರಿನಲ್ಲಿ ಕನ್ನಡ ಪರ ಸಂಘಟನೆಗಳು ಬೈಕ್ ರಾಲಿಗಳು ಮತ್ತು ಕಾಲ್ನಡಿಗೆಯ ಜಾಥಾ ನಡೆಸಿದ್ದಾರೆ. ಎಲ್ಲಾ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಟೌನ್ ಹಾಲ್ ಬಳಿ ಬಂದು ಸೇರುತ್ತಿದ್ದು, ಇನ್ನು ಸ್ವಲ್ಪ ಹೊತ್ತಿನಲ್ಲೇ ಪ್ರತಿಭಟನಾ ಮೆರವಣಿಗೆ ಆರಂಭವಾಗುತ್ತದೆ.
ವಾಟಾಳ್ ನಾಗರಾಜ್ ಟೌನ್ ಹಾಲ್ ಬಳಿಗೆ ಸೈಕಲ್ ಏರಿ ಆಗಮಿಸಿದಾಗ ಅವರ ಬೆಂಬಲಿಗರು ಅವರ ಹಿಂದೆಯೇ ಓಡಿಬಂದರು. ಕರವೇ ಕಾರ್ಯಕರ್ತರು ಮೇಕ್ರಿವೃತ್ತದಿಂದ ಟೌನ್ಹಾಲ್ಗೆ ಆಗಮಿಸಿದ್ದಾರೆ. ಸ್ಯಾಂಡಲ್ ವುಡ್ ತಂತ್ರಜ್ಞರು ಗಾಂಧಿನಗರದಿಂದ ಆಗಮಿಸಿದ್ದಾರೆ. ಟೌನ್ಹಾಲ್ನಿಂದ ಆರಂಭವಾಗುವ ಮೆರವಣಿಗೆ ಫ್ರೀಡಂಪಾರ್ಕ್ನಲ್ಲಿ ಮುಕ್ತಾಯವಾಗುತ್ತದೆ. ನಂತರ ಸಿಎಂ ಸಿದ್ದರಾಮಯ್ಯ ಅವರ ಬಳಿಗೆ ಒಂದು ನಿಯೋಗ ತೆರಳಿ ಮನವಿ ಸಲ್ಲಿಸಲಿದೆ.