ಗಣಿ ನವೀಕರಣ ಹಗರಣ ಅರ್ಕಾವತಿ ಹಗರಣಕ್ಕಿಂತಲೂ ದೊಡ್ಡದು: ಈಶ್ವರಪ್ಪ

ಮಂಗಳವಾರ, 3 ಮಾರ್ಚ್ 2015 (18:40 IST)
ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಎಂಬುದು ತಾಂಡವವಾಡುತ್ತಿದ್ದು, ಕೇಂದ್ರ ಸರ್ಕಾರದ ನಿಯಮಾವಳಿಯನ್ನು ಉಲ್ಲಂಘಿಸಿ ಸಿಎಂ ಸಿದ್ದರಾಮಯ್ಯ ಗುತ್ತಿಗೆ ನವೀಕರಣಕ್ಕೆ ಹಸಿರು ನಿಶಾನೆ ತೋರಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಿಧಾನ ಪರಿಷತ್ ನ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪನವರು ಹರಿಹಾಯ್ದರು.
 
ರಾಯಚೂರಿನಲ್ಲಿ ಮಾಧ್ಯಮಗಲೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರು ಕೇಂದ್ರ ಸರ್ಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿದ್ದು, ಸುಮಾರು 8 ಗಣಿಗಳ ಗುತ್ತಿಗೆ ನವೀಕರಣವನ್ನು ಮಾಡಿಕೊಟ್ಟಿದ್ದಾರೆ. ಇದರಿಂದ ಸರ್ಕಾರಕ್ಕೆ ಸಾವಿರಾರು ಕೋಟಿ ನಷ್ಟವಾಗಿದೆ. ಇದು ಅರ್ಕಾವತಿ ಹಗರಣಕ್ಕಿಂತಲೂ ದೊಡ್ಡ ಹಗರಣವಾಗಿದೆ. ಅಲ್ಲದೆ ಇಂತಹ ಚಟುವಟಿಕೆಗಳು ಸರ್ಕಾರದಲ್ಲಿ ನಿರಂತರವಾಗಿ ನಡೆಯುತ್ತಿದ್ದು, ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ಎಂಬುದು ತಾಂಡವವಾಡುತ್ತಿದೆ ಎಂದು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.  
 
ಕೇಂದ್ರ ಸರ್ಕಾರವು ಭೂ ಸ್ವಾಧೀನ ಕಾಯಿದೆ ಅಡಿಯಲ್ಲಿ ತಿದ್ದುಪಡಿ ತಂದಿದ್ದು, ಈ ಸಂಬಂಧ ಕೇಂದ್ರವು ಜ.12ರಂದು ಸುಗ್ರೀವಾಜ್ಞೆಯನ್ನು ಹೊರಡಿಸಿತ್ತು. ಸುಗ್ರೀವಾಜ್ಞೆಯ ನಿಯಮಾವಳಿ ಪ್ರಕಾರ ಗಣಿಗಳಿಗೆ ಗುತ್ತಿಗೆ ನೀಡದೆ ಇರುವ ಎಲ್ಲಾ ಖನಿಜವನ್ನು ಹರಾಜು ಹಾಕಬೇಕು ಎಂದು ಸೂಚಿಸಿತ್ತು. ಇದಕ್ಕೆ ರಾಜ್ಯ ಸರ್ಕಾರವೂ ಕೂಡ ಒಪ್ಪಿಗೆ ಸೂಚಿಸಿತ್ತು. ಆದರೆ ಸಿಎಂ ಸಿದ್ದರಾಮಯ್ಯನವರು ಸುಗ್ರೀವಾಜ್ಞೆ ಹೊರಡಿಸಿದ್ದ ದಿನವೇ ರಾಜ್ಯದ 8 ಗಣಿ ಕಂಪನಿಗಳ ಗುತ್ತಿಗೆ ಪರವಾನಿಗೆಯನ್ನು ನವೀಕರಣಗೊಳಿಸಿಕೊಟ್ಟಿದ್ದರು. ಇದು ಪ್ರಸ್ತುತ ವಿವಾದಕ್ಕೆ ಗುರಿಯಾಗಿದೆ. 
 

ವೆಬ್ದುನಿಯಾವನ್ನು ಓದಿ