ರಾಜಧಾನಿಗೆ ಆಗಮಿಸುತ್ತಿರುವ ಸಚಿವ ಸತೀಶ್ ಜಾರಕಿಹೋಳಿ

ಶುಕ್ರವಾರ, 30 ಜನವರಿ 2015 (17:37 IST)
ಅಬಕಾರಿ ಸಚಿವ ಸತೀಶ್ ಜಾರಕಿಹೋಳಿ ಅವರು ಈಗಾಗಲೇ ತಮ್ಮ ಸ್ವಗ್ರಾಮ ಬೆಳಗಾವಿಯಿಂದ ರಾಜಧಾನಿ ಬೆಂಗಳೂರಿಗೆ ಆಗಮಿಸುತ್ತಿದ್ದು, ಇಂದು ಸಂಜೆ 8 ಗಂಟೆ ವೇಳೆಗೆ ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 
 
ಸಂಪುಟದಲ್ಲಿ ಸೂಕ್ತ ಸ್ಥಾನವನ್ನು ನೀಡಿಲ್ಲ ಎಂದು ಸಿಎಂ ಸಿದ್ದರಾಮಯ್ಯನವರ ವಿರುದ್ಧ ಅಸಮಧಾನಗೊಂಡಿದ್ದ ಸಚಿವರು, ತಾವು ಈಗಾಗಲೇ ನಿರ್ವಹಿಸುತ್ತಿರುವ ಅಬಕಾರಿ ಖಾತೆಯನ್ನು ತ್ಯಜಿಸುವುದಾಗಿ ತಿಳಿಸಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಆದರೆ ರಾಜೀನಾಮೆಯ ಬಳಿಕ ಸಿಎಂ ಸಿದ್ದರಾಮಯ್ಯನವರನ್ನು ಅವರ ಬೆಂಬಲಿಗರು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಸಭೆಯಲ್ಲಿ ಸಿಎಂ ಕೂಡ ಮುಂದಿನ ಸಂಪುಟ ವಿಸ್ತರಣೆ ವೇಳೆಯಲ್ಲಿ ಅವರ ಖಾತೆಯನ್ನು ಬದಲಿಸಿ ಉತ್ತಮ ಖಾತೆಯನ್ನು ನಿಯೋಜಿಸಲಾಗುವುದು ಎಂಬುದಾಗಿ ತಿಳಿಸಿದ್ದರು. 
 
ಸಿಎಂ ಹಾಗೂ ಸಚಿವರ ನಿಯೋಗದ ಮಾಯುಕತೆ ಬಳಿಕ ಸಿಎಂ ಸಿದ್ದರಾಮಯ್ಯನವರು ಅಬಕಾರಿ ಖಾತೆಯ ಜೊತೆಗೆ ತಾವೇ ನಿರ್ವಹಿಸುತ್ತಿರುವ ಸಣ್ಣ ಕೈಗಾರಿಕೆ ಖಾತೆಯನ್ನು ವಹಿಸುವುದಾಗಿ ತಿಳಿಸಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿಯೇ ಸಚಿವರು ಬೆಂಗಳೂರಿಗೆ ಆಗಮಿಸುತ್ತಿದ್ದು, ಸಿಎಂ ಅವರೊಂದಿಗೆ ಇಂದು ರಾತ್ರಿ ಮಾತುಕತೆ ನಡೆಸುತ್ತಿದ್ದಾರೆ ಎಂಬ ಗುಸುಗುಸು ಸುದ್ದಿ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. 

ವೆಬ್ದುನಿಯಾವನ್ನು ಓದಿ