ವಿಧಾನ ಪರಿಷತ್ ಕಲಾಪದಲ್ಲಿ ಮಾತನಾಡಿದ ಈಶ್ವರಪ್ಪ, ಸಚಿವರು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಅಲ್ಲದೆ ಸಚಿವರು ತಮ್ಮ ಕಾರ್ಯವನ್ನು ನಿರ್ವಹಿಸುವಲ್ಲಿ ವಿಫಲವಾಗಿದ್ದಾರೆ. ಅಂತಹ ಅಸಮರ್ಥ ಸಚಿವರನ್ನು ಸಂಪುಟದಿಂದ ಕೈ ಬಿಟ್ಟು ನೂತನ, ಸಮರ್ಥ ಸಚಿವರನ್ನು ಆಯ್ಕೆ ಮಾಡಿಕೊಂಡು ಸರ್ಕಾರ ನಡೆಸಲಿ ಎಂದ ಅವರು, ಏಕೆಂದರೆ ಸರ್ಕಾರದಲ್ಲಿನ ಸಚಿವರು ಅಧಿಕಾರಿಗಳ ಮೊರೆ ಹೋಗುತ್ತಿದ್ದು, ಅವರೆದುರು ಅಮ್ಮಾವ್ರ ಗಂಡಂದಿರಂತೆ ವರ್ತಿಸುತ್ತಿದ್ದಾರೆ ಎಂದರು.
ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಆಡಳಿತ ಪಕ್ಷದ ಸದಸ್ಯ ವಿ.ಎಸ್.ಉಗ್ರಪ್ಪ, ರೀ ಈಶ್ವರಪ್ಪನವರೇ ನಿಮ್ಮ ತಲೆ ಮೇಲೆ ಗಂಗೆ ಇದ್ದಾಳೆ, ತೊಡೆ ಮೇಲೆ ಗೌರಿ ಇದ್ದಾಳೆ. ಹಾಗಾಗಿ ನೀವೆ ಅಮ್ಮಾವ್ರ ಗಂಡ ಎಂದು ಟಾಂಗ್ ನೀಡಿದರು.
ಬಳಿಕ ಪ್ರತಿಕ್ರಿಯಿಸಿದ ಕಾಂಗ್ರೆಸ್ ಸದಸ್ಯೆ ಮೋಟಮ್ಮ, ಮಹಿಳೆಯರಿಗೆ ಆದ್ಯತೆ ನೀಡಿದಲ್ಲಿ ಸುಖೀ ಸಂಸಾರವನ್ನು ಕಾಣಬಹುದಾಗಿದೆ. ಅದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದರು. ಬಳಿಕ ಮಾತನಾಡಿದ ಈಶ್ವರಪ್ಪ, ಅಮ್ಮಾವ್ರ ಗಂಡಂದಿರಾಗೋದು ಗುಲಾಮರು ಸಮರ್ಥರಲ್ಲ. ಸಮರ್ಥರಾದವರು ಧರ್ಮ ಪತ್ನಿ ಅಥವಾ ಧರ್ಮ ಪತಿಯ ಸ್ಥಾನ ನೀಡುತ್ತಾರೆ ಎಂದರು.