ಬಂದ್ಗೆ ನಗರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜನಜೀವನ ಎಂದಿನಂತೆ ಸಹಜವಾಗಿದೆ. ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್, ಆಟೋ ಹಾಗೂ ರೈಲು ಸಂಚಾರದಲ್ಲಿ ಯಾವುದೇ ವತ್ಯಯ ಉಂಟಾಗಿಲ್ಲ. ಸರಕಾರಿ ಶಾಲೆಗಳು ತೆರೆದಿವೆ. ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವುದರಿಂದ ಶೇ.10ರಷ್ಟು ಬಿಎಂಟಿಸಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ.
ಕೆಲ ಖಾಸಗಿ ಶಾಲೆಗಳು, ಕಾಲೇಜುಗಳು ರಜೆ ಘೋಷಿಸಿದ್ದು, ಆರ್ಎಂಸಿ ಯಾರ್ಡ್, ನಗರದ ಬಹುತೇಕ ಮಾಲ್ಗಳು, ಚಿತ್ರ ಮಂದಿರಗಳು, ಹೋಟೆಲ್ ಮಾಲೀಕರು, ಸರ್ಕಾರಿ ನೌಕರರ ಸಂಘಟನೆ, ಹಾಗೂ ಬೆಂಗಳೂರು ಜ್ಯುವೆಲ್ಲರ್ಸ್ ಮಾಲೀಕರ ಸಂಘ ಮತ್ತು ಗಾರ್ಮೆಂಟ್ಸ್ ಕಂಪನಿಗಳು ಸಹ ಬಂದ್ಗೆ ಬೆಂಬಲ ಸೂಚಿಸಿ ರಜೆ ಘೋಷಣೆ ಮಾಡಿವೆ.
ಪುರಭವನವದ ಮುಂದೆ ಪ್ರತಿಭಟನೆ ಕೈಗೊಂಡಿರುವ ವಿವಿಧ ಸಂಘಟನೆಗಳು ನ್ಯಾಯಕ್ಕಾಗಿ ಆಗ್ರಹಿಸುತ್ತಿವೆ.ಕರ್ನಾಟಕದಲ್ಲಿ ರೇಪ್ ಪ್ರಕರಣಗಳು ನಿಲ್ಲಬೇಕು, ಕಾಮುಕರ ರಾಜ್ಯ, ಬೆಂಗಳೂರು ರೇಪ್ ಸಿಟಿ ಎಂಬ ಕಳಂಕವನ್ನು ತೊಡೆದು ಹಾಕಬೇಕು , ಎಮ್ಇಎಸ್ ಪುಂಡಾಟ ನಿಲ್ಲಬೇಕು. ಈ ಬಗ್ಗೆ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.