ನಿಮ್ಮ ಬೆಲೆ ಎಷ್ಟು? ನೀವೆಷ್ಟಕ್ಕೆ ಮಾರಾಟವಾಗಿದ್ದೀರಿ?: ಶಾಸಕನ ವಿರುದ್ಧ ಅವಹೇಳನಕಾರಿ ಫೇಸ್‌ಬುಕ್‌ ಪೋಸ್ಟಿಂಗ್

ಶನಿವಾರ, 2 ಆಗಸ್ಟ್ 2014 (11:31 IST)
ಹೇಮಂತ್ ಕುಮಾರ್ ಎಂಬುವವರು ತಮ್ಮ ವಿರುದ್ಧ ಅವಹೇಳನಕಾರಿ ಫೇಸ್‌ಬುಕ್‌ ಪೋಸ್ಟಿಂಗ್ ಮಾಡಿದ್ದಾರೆ ಎಂದು ಮೈಸೂರಿನ ಕೆ ಆರ್ ನಗರ ಶಾಸಕ ಸಾರಾ ಮಹೇಶ್ ಲಕ್ಷ್ಮೀಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆತ ಒಬ್ಬ  ಪ್ರತಿಷ್ಠಿತ ವ್ಯಕ್ತಿಯ ಪುತ್ರ ಎಂದು ತಿಳಿದು ಬಂದಿದೆ. 

ಕಳೆದ ಕೆಲ ದಿನಗಳ ಹಿಂದೆ ರಾಜ್ಯಾದ್ಯಂತ ತೀವೃ ಚರ್ಚೆಗೊಳಗಾಗಿದ್ದ ಜೆಡಿಎಸ್ ನಾಯಕ ಕುಮಾರ ಸ್ವಾಮಿಯವರ ಶಾಸಕರ ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇರುವ ಈ ಪೋಸ್ಟಿಂಗ್‌ನಲ್ಲಿ  ಮಹೇಶ ಅವರೇ ನಿಮ್ಮ ಬೆಲೆ ಎಷ್ಟು? ನೀವೆಷ್ಟು ಹಣಕ್ಕೆ ಮಾರಾಟವಾಗಿದ್ದೀರಿ ಎಂದು ಪ್ರಶ್ನಿಸಿ ಕೆ ಆರ್ ನಗರದ ಹೇಮಂತ್ ಕುಮಾರ್  ಅನ್ನುವವರು ಪೋಸ್ಟ್ ಪ್ರಕಟಿಸಿದ್ದಾರೆ ಎಂದು ಸಾರಾ ಮಹೇಶ್  ದೂರಿದ್ದಾರೆ. 
 
ಅವರ ದೂರಿನ ಆಧಾರದ ಮೇಲೆ  ಹೇಮಂತ್ ಕುಮಾರ್ ಅವರಿಗೆ  ಲಕ್ಷ್ಮೀಪುರ ಪೋಲಿಸ್ ಠಾಣೆಯಿಂದ ನೋಟಿಸ್ ಜಾರಿಯಾಗಿದ್ದು, ಆಗಸ್ಟ್ 4 ರಂದು  ಠಾಣೆಗೆ ಬಂದು ವಿಚಾರಣೆಗೆ ಹಾಜರಾಗುವಂತೆ ಮತ್ತು ತಮ್ಮ ಪೋಸ್ಟ್ ಬಗ್ಗೆ  ಸ್ಪಷ್ಟೀಕರಣ ನೀಡುವಂತೆ  ನೋಟಿಸ್‌ನಲ್ಲಿ ತಿಳಿಸಲಾಗಿದೆ.  
 
ಈ ಕುರಿತು ಪ್ರತಿಕ್ರಿಯಿಸಿರುವ  ಸಾ ರಾ ಮಹೇಶ,  "ಇತ್ತೀಚಿಗೆ ಫೇಸ್‌ಬುಕ್‌ನ ಋಣಾತ್ಮಕ ಬಳಕೆ ಹೆಚ್ಚುತ್ತಿದೆ. ಅದಕ್ಕೆ ತುರ್ತಾಗಿ ಕಡಿವಾಣ ಹಾಕುವ ಅಗತ್ಯವಿದೆ. ನನ್ನ ಬಗ್ಗೆ  ಕೆಟ್ಟದಾಗಿ ಪೋಸ್ಟ್ ಮಾಡಿರುವವ ಯುವಕನಾಗಿದ್ದು, ಇಂತಹ ಘಟನೆಗಳು ಮರುಕಳಿಸದಂತೆ  ಎಚ್ಚರಿಕೆಯಾಗಲಿ ಎಂಬ ಉದ್ದೇಶದಿಂದ ದೂರು ನೀಡಿದ್ದೇನೆ" ಎಂದಿದ್ದಾರೆ. 

ವೆಬ್ದುನಿಯಾವನ್ನು ಓದಿ