ಮತ್ತೆ ಮರಾಠಿ ಭಾಷಣದಲ್ಲಿ ಸದ್ದು ಮಾಡಿದ ಶಾಸಕ ಸಂಭಾಜಿ ಪಾಟೀಲ್...?!

ಶನಿವಾರ, 28 ಮಾರ್ಚ್ 2015 (14:10 IST)
ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯಲ್ಲಿ ನಡೆಯುತ್ತಿರುವ ಯುವಜನೋತ್ಸವದಲ್ಲಿ ಕನ್ನಡದ ಬದಲು ಮರಾಠಿ ಭಾಷಣ ಮಾಡಲು ಯತ್ನಿಸಿದ ಶಾಸಕರ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.  
 
ಕನ್ನಡದ ಬದಲು ಮರಾಠಿ ಭಾಷಣಕ್ಕೆ ಮುಂದಾದವರು ಎಂಇಎಸ್ ಪಕ್ಷದ ಶಾಸಕ ಸಂಭಾಜಿ ಪಾಟೀಲ್. ಇವರು ಬೆಳಗಾವಿ ನಗರದ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. 
 
 ಈ ವೇಳೆ ಮರಾಠಿಯಲ್ಲಿ ಮಾತನಾಡಲು ಶಾಸಕರು ಯತ್ನಿಸಿದರು. ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಕನ್ನಡದಲ್ಲಿ ಬಾಷಣ ಮಾಡುವಂತೆ ಪ್ರತಿಭಟನೆಗಿಳಿದು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಕನ್ನಡದಲ್ಲಿಯೇ ಮಾತನಾಡಿದ ಸಂಭಾಜಿ ಪಾಟೀಲ್ ನಾನು ಕನ್ನಡದಲ್ಲಿ ಮಾತನಾಡಿದರೆ ನೀವು ಮಾತನಾಡುವ ಕನ್ನಡವೂ ಮರೆತುಹೋಗುತ್ತದೆ. ಈ ಹಿನ್ನೆಲೆಯಲ್ಲಿ ಮರಾಠಿ ಮಾತನಾಡುತ್ತಿದ್ದೇನೆ ಎಂದರು. ಬಳಿಕ ಕನ್ನಡದಲ್ಲಿಯೇ ತಮ್ಮ ಬಾಷಣವನ್ನು ಮುಗಿಸಿದರು. 
 
ಇನ್ನು ಈ ಯುವಜನೋತ್ಸವ ಕಾರ್ಯಕ್ರಮವು ನಾಲ್ಕು ದಿನಗಳ ಕಾಲ ನಡೆಯಲಿದ್ದು, ಕಾರ್ಯಕ್ರಮವನ್ನು ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಅವರು ಉದ್ಘಾಟಿಸುವ ಮೂಲಕ ಚಾಲನೆ ನೀಡಿದರು. 
 
ಕಾರ್ಯಕ್ರಮದಲ್ಲಿ ವಿವಿಯ ಕುಲಪತಿ ಎಸ್.ಮಹೇಶಪ್ಪ, ವಿವಿಯ ವಿವಿಧ ಕಾಲೇಜುಗಳ ಬೋದಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿವಿಯ ಸಾಕಷ್ಟು ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. 

ವೆಬ್ದುನಿಯಾವನ್ನು ಓದಿ