ಸೊಸೆಗೆ ಕತ್ತರಿಯಿಂದ ಇರಿದು ಕೊಲೆ ಮಾಡಿದ ಅತ್ತೆ

ಸೋಮವಾರ, 19 ಮೇ 2014 (20:34 IST)
ಅತ್ತೆ, ಸೊಸೆ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಭೀಕರ ಘಟನೆ ಶಿರೂರಿನ ಮೋಗ್ಲಿಯಲ್ಲಿ ಸಂಭವಿಸಿದೆ. ಅತ್ತೆ ಚಂದ್ರಾವತಿ ಕೋಪದ ಭರದಲ್ಲಿ ತನ್ನ ಸೊಸೆಗೆ ಎರಡು ಕತ್ತರಿಗಳಿಂದ ಕುತ್ತಿಗೆಗೆ ಇರಿದಿದ್ದರಿಂದ ತೀವ್ರ ರಕ್ತಸ್ರಾವವಾಗಿ ಸೊಸೆ ನಾಗರತ್ನ ಸಾವನ್ನಪ್ಪಿದ್ದಾರೆ.

ಇವರು ಮಂಜುನಾಥ್ ಎಂಬವರ ಪತ್ನಿಯಾಗಿದ್ದರು. ಚಂದ್ರಾವತಿ ಮತ್ತು ಸೊಸೆ ನಾಗರತ್ನಳ ನಡುವೆ ಆಗಾಗ್ಗೆ ಕ್ಷುಲ್ಲಕ ಕಾರಣಗಳಿಗಾಗಿ ಜಗಳವಾಗುತ್ತಿತ್ತು. ಸೋಮವಾರ ನಾಗರತ್ನ ತನ್ನ ಸೋದರಿಯ ವಿವಾಹ ಸಮಾರಂಭಕ್ಕೆ ಹಾಜರಾಗಲು ಅಂಬಾಗಿಲಿನ ಉಪ್ಪುಂದದಲ್ಲಿರುವ ತಾಯಿ ಮನೆಗೆ ಹೊರಟಿದ್ದರು.

ಬೆಳಿಗ್ಗೆ 11 ಗಂಟೆಗೆ ಅವರಿಬ್ಬರ ನಡುವೆ ಪುನಃ ಜಗಳ ಷುರುವಾಗಿ ಚಂದ್ರಾವತಿ ಎರಡು ಕತ್ತರಿಗಳನ್ನು ಕೈಗೆ ತೆಗೆದುಕೊಂಡು ನಾಗರತ್ನಳ ಕುತ್ತಿಗೆಗೆ ಇರಿದಳೆಂದು ತಿಳಿದುಬಂದಿದೆ.

ಆರೋಪಿ ಚಂದ್ರಾವತಿ ಟೈಲರಿಂಗ್ ವ್ಯವಹಾರ ನಡೆಸುತ್ತಿದ್ದು, ನಾಗರತ್ನಳ ಗಂಡ ಸಿರ್ಸಿಯಲ್ಲಿ ಬಡಗಿಯಾಗಿದ್ದಾರೆ. ಚಂದ್ರಾವತಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ನಾಗರತ್ನಳಿಗೆ ಮೂವರು ಮಕ್ಕಳಿದ್ದಾರೆ. ದೇಹವನ್ನು ಬೈಂದೂರಿನ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. 

ವೆಬ್ದುನಿಯಾವನ್ನು ಓದಿ