ಹಡೆದವಳೇ ಹೆಣವಾಗಿಸಿದಳು

ಶನಿವಾರ, 9 ಜನವರಿ 2016 (08:59 IST)
ಕಾಯಿಲೆಯಿಂದ ಬಳಲುತ್ತಿದ್ದ ಪುಟ್ಟ ಮಗುವಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ಸಾಧ್ಯವಾಗುತ್ತಿಲ್ಲವೆಂದು ತಾಯಿಯೇ ಅದನ್ನು ಉಸಿರುಗಟ್ಟಿಸಿ ಕೊಂದ ಹೃದಯವಿದ್ರಾವಕ ಘಟನೆ ನಾಗಮಂಗಲದಲ್ಲಿ ನಡೆದಿದೆ.
 
ಹೆತ್ತ ಮಗುವನ್ನೇ ಸಾಯಿಸಿದ ತಾಯಿಯನ್ನು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಗೌಡಗೆರೆ ಪ್ರೇಮಕುಮಾರಿ ಎಂದು ಗುರುತಿಸಲಾಗಿದೆ. ಕೃಷ್ಣಮೂರ್ತಿ ಮತ್ತು ಪ್ರೇಮಕುಮಾರಿ ದಂಪತಿಯ 6 ತಿಂಗಳ ಗಂಡು ಮಗು ಕಳೆದ 6 ತಿಂಗಳಿಂದ ಹೃದಯ ಸಂಬಂಧಿ ತೊಂದರೆಯಿಂದ ಬಳಲುತ್ತಿತ್ತು. ಚಿಕಿತ್ಸೆಗಾಗಿ ಅದನ್ನು ನಾಗಮಂಗಲದ  ಬೆಳ್ಳೂರಿನ ಬಿ.ಜಿ.ನಗರದಲ್ಲಿರುವ ಆದಿಚುಂಚನಗಿರಿ ಆಸ್ಪತ್ರೆಗೆ ಕರೆ ತರಲಾಗಿತ್ತು. 
 
ಮಗುವಿಗೆ ಚಿಕಿತ್ಸೆ ನೀಡಲು ಲಕ್ಷಗಟ್ಟಲೆ ಹಣ ಖರ್ಚಾಗುತ್ತದೆ ಎಂದು ವೈದ್ಯರು ತಿಳಿಸಿದ್ದರು ಎನ್ನಲಾಗಿದೆ. ಆದರೆ ಬಡತನದಲ್ಲಿ ಜೀವನ ನಡೆಸುತ್ತಿರುವ ದಂಪತಿಗಳ ಪಾಲಿಗೆ ಅಷ್ಟೊಂದು ಹಣವನ್ನು ಹೊಂದಿಸುವುದು ಗಗನಕುಸುಮವಾಗಿತ್ತು. ಹೀಗಾಗಿ ದಿಕ್ಕುತೋಚದಂತಾದ ತಾಯಿ ಪ್ರೇಮಕುಮಾರಿ ಮಗುವಿನ ಉಸಿರುಗಟ್ಟಿಸಿ ಕೊಂದು ಮಗು ಮೃತಪಟ್ಟಿದೆ ಎಂದು ಗೋಳಾಡಿದ್ದಾಳೆ. ಆದರೆ ವೈದ್ಯರು ಪರೀಕ್ಷೆ ನಡೆಸಿದಾಗ ಮಗುವನ್ನು ಹತ್ಯಗೈದುದು ಬೆಳಕಿಗೆ ಬಂದಿದೆ. 
 
ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ತಾಯಿ ಪ್ರೇಮಕುಮಾರಿಯನ್ನು ಪೊಲೀಸರು ಬಂಧಿಸಿದ್ದಾರೆ.

ವೆಬ್ದುನಿಯಾವನ್ನು ಓದಿ