ನೀರಿನ ಸಮಸ್ಯೆಯಿಂದ ತತ್ತರಿಸಿ ಹೋಗಿರುವ ಕೋಲಾರ, ಚಿಕ್ಕಬಳ್ಳಾಪುರದ ಬವಣೆಯನ್ನು ನೀಗಿಸದಿದ್ದರೆ ತೀವೃ ಪ್ರತಿಭಟನೆ ಕೈಗೊಳ್ಳುವುದಾಗಿ ಕೋಲಾರದ ಸಂಸದ ಕೆ. ಹೆಚ್. ಮುನಿಯಪ್ಪ ರಾಜ್ಯಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಚಿಕ್ಕ ಬಳ್ಳಾಪುರದಲ್ಲಿ ಅವರು ಮಾತನಾಡುತ್ತಿದ್ದರು.
"ರಾಜ್ಯದ ಕರಾವಳಿ, ಮೈಸೂರು ಭಾಗಕ್ಕೆ ನೀರಿನ ಸಮಸ್ಯೆಯಿಲ್ಲ. ಆದರೆ ಕೋಲಾರ , ಚಿಕ್ಕಬಳ್ಳಾಪುರದ ಜನತೆ ನೀರಿನ ಸಮಸ್ಯೆಯಿಂದ ತತ್ತರಿಸಿ ಹೋಗಿದೆ. ಇಲ್ಲಿನ ಜನರ ಬದುಕು ಡೋಲಾಯಮಾನವಾಗಿದ್ದು, ಅವರ ಭವಿಷ್ಯ ಅತಂತ್ರವಾಗಿದೆ. ಆದ್ದರಿಂದ ಸರ್ಕಾರ ಕೆ,ಸಿ ವ್ಯಾಲಿ ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸಬೇಕು. ಆದಷ್ಟು ಬೇಗ ಶಂಕು ಸ್ಥಾಪನೆ ಮಾಡಿ ನೀರು ಪೂರೈಕೆ ಮಾಡಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
"ಪಕ್ಷಭೇದ ಮರೆತು ಈ ಭಾಗದ ಶಾಸಕರು, ಸಂಸದರು ನೀರಿಗಾಗಿ ಹೋರಾಡಬೇಕು. ಸದನದ ಒಳಗೆ ಮತ್ತು ಹೊರಗೆ ಹೋರಾಡುವ ಅನಿವಾರ್ಯತೆ ಎದುರಾಗಿದೆ", ಎಂದು ಅವರು ಕರೆ ನೀಡಿದ್ದಾರೆ.