ಮತ್ತಿಕೆರೆಯ ಜೆಪಿ ಪಾರ್ಕ್ ಬಳಿ ಫೈವ್ ಪಾರ್ಕ್ ವೈನ್ ಶಾಪ್ ಎದುರು ವೆಂಕಟೇಶ್ ಎಂಬ ವ್ಯಕ್ತಿಯೊಬ್ಬರನ್ನು ಇಬ್ಬರು ದುಷ್ಕರ್ಮಿಗಳು ನಿನ್ನೆ ರಾತ್ರಿ ಬರ್ಬರವಾಗಿ ಥಳಿಸಿ ಹತ್ಯೆ ಮಾಡಿದ ಘಟನೆ ಸಂಭವಿಸಿದೆ. ವೆಂಕಟೇಶ್ ಸಿಗರೇಟು ಸೇದುತ್ತಿದ್ದರೆಂದು ಆಕ್ಷೇಪ ವ್ಯಕ್ತಪಡಿಸಿದಾಗ ಅವರ ನಡುವೆ ಮಾತಿನ ಚಕಮಕಿ ನಡೆಯಿತು. ಆಗ ಕ್ಷುಲ್ಲಕ ಕಾರಣಕ್ಕೆ ಇಬ್ಬರು ವ್ಯಕ್ತಿಗಳು ವೆಂಕಟೇಶ್ ಅವರನ್ನು ಹಿಗ್ಗಾಮುಗ್ಗಾ ಥಳಿಸಿದರು.
ಮರ್ಡರ್ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೆಲಕ್ಕೆ ಹಾಕಿ ತುಳಿದು ಕಾಲಿನಿಂದ ಒದ್ದು, ಕುತ್ತಿಗೆಯ ಮೇಲೆ ಕಾಲಿಟ್ಟು ಅಮುಕಿ ದುಷ್ಕರ್ಮಿಗಳು ಸಾಯಿಸಿಯೇ ಬಿಟ್ಟರು. ಅವರು ಯಾವುದೇ ಮಾರಕಾಸ್ತ್ರಗಳಿಂದ ದಾಳಿ ಮಾಡಿರದಿದ್ದರೂ ಕುತ್ತಿಗೆಯ ಮೇಲೆ ಕಾಲಿಟ್ಟು ಅಮುಕಿದ್ದರಿಂದ ವೆಂಕಟೇಶ್ ಉಸಿರುಗಟ್ಟಿ ಸತ್ತಿರಬಹುದೆಂದು ಶಂಕಿಸಲಾಗಿದೆ. ಸುತ್ತಮುತ್ತಲಿದ್ದ ಜನರು ಇದನ್ನು ಮೂಕಪ್ರೇಕ್ಷಕರಂತೆ ನೋಡುತ್ತಾ ನಿಂತು, ಮಾನವೀಯತೆ ಮರೆತಿದ್ದರು. ದುಷ್ಕರ್ಮಿಗಳ ಬಳಿ ಮಾರಕಾಸ್ತ್ರ ಇಲ್ಲದಿರುವುದರಿಂದ ಜನರು ವ್ಯಕ್ತಿಯನ್ನು ಅವರ ಕೈಯಿಂದ ಬಿಡಿಸಬಹುದಿತ್ತು.