ಭಾರತದಲ್ಲಿ ಮುಸ್ಲಿಮರು ಸಂಪೂರ್ಣ ಸುರಕ್ಷಿತವಾಗಿದ್ದಾರೆ:ಯೋಗಿ ಆದಿತ್ಯನಾಥ್
ಸೋಮವಾರ, 2 ಮಾರ್ಚ್ 2015 (14:17 IST)
ವಿಶ್ವದಲ್ಲಿರುವ ಎಲ್ಲಾ ಮುಸ್ಲಿಮರಿಗಿಂತ ಭಾರತದಲ್ಲಿರುವ ಮುಸ್ಲಿಮರು ಸಂಪೂರ್ಣವಾಗಿ ಸುರಕ್ಷಿತವಾಗಿದ್ದಾರೆ ಎಂದು ಫೈರ್ಬ್ರ್ಯಾಂಡ್ ಖ್ಯಾತಿಯ ಸಂಸದ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಹಿಂದೂಗಳು ಉದಾರ ಮನೋಭಾವನೆಗಳನ್ನು ಹೊಂದಿರುವುದರಿಂದ ದೇಶವು ಉದಾರವಾಗಿದೆ. ಆದ್ದರಿಂದ ದೇಶದಲ್ಲಿರುವ ಮುಸ್ಲಿಮರು ಸುರಕ್ಷಿತವಾಗಿದ್ದಾರೆ ಎಂದು ವಿರಾಟ್ ಹಿಂದೂ ಸಮಾವೇಶದಲ್ಲಿ ತಿಳಿಸಿದ್ದಾರೆ.
ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆಯನ್ನು ಸಮರ್ಥಿಸಿಕೊಂಡ ಅವರು ಸೇವೆಯ ಹೆಸರಲ್ಲಿ ಮತಾಂತರಕ್ಕೆ ಪ್ರೋತ್ಸಾಹ ನೀಡುತ್ತಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ಮದರ್ ತೆರೇಸಾ ಸೇವೆಯ ಹಿಂದೆ ಮತಾಂತರದ ಹುನ್ನಾರ ಅಡಗಿತ್ತು ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಕೆಲ ದಿನಗಳ ಹಿಂದೆ ಹೇಳಿಕೆ ನೀಡಿದ್ದರು.
ವಿಚ್ಪಿ ನಾಯಕ ಪ್ರವೀಣ್ ತೊಗಾಡಿಯಾ ಅವರಿಗೆ ಬೆಂಗಳೂರಿಗೆ ಬರುವುದನ್ನು ಕಾಂಗ್ರೆಸ್ ಸರಕಾರ ನಿಷೇಧಿಸಿರುವುದು ತಪ್ಪು ನಿರ್ಧಾರ ಎಂದು ಬಿಜೆಪಿ ಸಂಸದ ಆದಿತ್ಯನಾಥ್ ಕಿಡಿಕಾರಿದ್ದಾರೆ.