ಜೂಜಾಟವಾಡಿ ಜೈಲು ಪಾಲಾದ ಸಂಸದ ಪ್ರತಾಪಸಿಂಹ ಸಹೋದರ!

ಶನಿವಾರ, 27 ಜೂನ್ 2015 (11:40 IST)
ಸಕಲೇಶಪುರದ ಬಿದರನಹಳ್ಳಿಯಲ್ಲಿ ಶುಕ್ರವಾರ ರಾತ್ರಿ ಜೂಜು ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರು ಭಾರತೀಯ ಜನತಾ ಪಕ್ಷದ ಸಂಸದ, ಪತ್ರಕರ್ತ ಪ್ರತಾಪ್ ಸಿಂಹ ಅವರ ಸಹೋದರ ಸೇರಿದಂತೆ ಒಂಬತ್ತು ಮಂದಿಯನ್ನು ಬಂಧಿಸಿದ್ದಾರೆ. 
 
ಸಕಲೇಶಪುರ ಉಪ ಅಧೀಕ್ಷಕರಾದ ಸ್ನೇಹಾ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಸಿಕ್ಕಿಬಿದ್ದ ಜೂಜುಕೋರರ ತಂಡದಲ್ಲಿ ಮೈಸೂರು- ಕೊಡಗು ಸಂಸದ ಸಿಂಹ ಅವರ ಸಹೋದರ ವಿಕ್ರಮ ಸಿಂಗ್ ಸಹ ಇದ್ದರೆಂದು ತಿಳಿದು ಬಂದಿದೆ. 
 
ಈ ಕುರಿತು ರಾಷ್ಟ್ರೀಯ ಮಾಧ್ಯಮ ಒಂದಕ್ಕೆ ಪ್ರತಿಕ್ರಿಯಿಸಿರುವ ಪೊಲೀಸ್ ಅಧೀಕ್ಷಕರಾದ ರಮಣ್ ಗುಪ್ತಾ, ವಿಕ್ರಮ್ ಮತ್ತು ಉಳಿದವರು ನಾವು ನಡೆಸಿದ ದಾಳಿಯಲ್ಲಿ ಸಿಕ್ಕಿ ಬಿದ್ದಿದ್ದಾರೆ ಎಂದು ಹೇಳಿದ್ದಾರೆ. 
 
ಬಂಧಿತರಿಂದ 14,000 ರೂಪಾಯಿಯನ್ನು ವಶಪಡಿಸಿಕೊಂಡಿರುವ ಸಕಲೇಶಪುರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. 

ವೆಬ್ದುನಿಯಾವನ್ನು ಓದಿ