ಬಿಜೆಪಿ ಜೊತೆ ಮೈತ್ರಿ ಮುಗಿದ ಅಧ್ಯಾಯ: ದೇವೇಗೌಡ

ಮಂಗಳವಾರ, 1 ಸೆಪ್ಟಂಬರ್ 2015 (14:48 IST)
ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡ ಅವರು ಇಂದು ಪ್ರತಿಕ್ರಿಯಿಸಿ ಬಿಜೆಪಿ ಜೊತೆಗಿನ ಮೈತ್ರಿ ವಿಷಯ ಮುಗಿದ ಅಧ್ಯಾಯ ಎಂದಿದ್ದು, ಇದು ಜೆಡಿಎಸ್ ಹಾಗೂ ಕಾಂಗ್ರೆಸ್‌ ಪಕ್ಷಗಳು ಮೈತ್ರಿ ಮಾಡಿಕೊಂಡು ಬಿಬಿಎಂಪಿಯ ಗದ್ದುಗೆ ಏರಲಿವೆ ಎಂಬ ಕಲ್ಪನೆಗೆ ಮತ್ತಷ್ಟು ಪುಷ್ಟಿ ನೀಡಿದೆ.  
 
ನಗರದ ಪದ್ಮನಾಭನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ದೇವೇಗೌಡರು, ಈ ಹಿಂದೆ ಬಿಜೆಪಿ ಮುಖಂಡರು ಬಿಬಿಎಂಪಿ ಮೈತ್ರಿ ಸಂಬಂಧ ಚರ್ಚಿಸಲು ಆಗಮಿಸುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಕೇಂದ್ರ ಸಚಿವ ಸದಾನಂದಗೌಡ ಅವರು ತಮ್ಮೊಂದಿಗೆ ಚರ್ಚಿಸಿದ್ದು ಬಿಟ್ಟರೆ ಬೇರಾರೂ ಬರಲಿಲ್ಲ. ಈ ಹಿನ್ನೆಲೆಯಲ್ಲಿ ಬಿಜೆಪಿ ಜೊತೆಗಿನ ಮೈತ್ರಿ ವಿಷಯ ಮುಗಿದ ಅಧ್ಯಾಯ ಎಂದು ಕಡ್ಡಿ ಮುರಿದಂತೆ ನುಡಿದರು.  
 
ಇನ್ನು ಗೌಡರ ಈ ಹೇಳಿಕೆಯಿಂದ ಕಾಂಗ್ರೆಸ್ ಪಕ್ಷವು ಪಾಲಿಕೆಯ ಗದ್ದುಗೆ ಏರುವುದು ಖಚಿತವಾಗಿದೆ. ಇದಲ್ಲದೆ ನಿನ್ನೆ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಕೂಡ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿ ಬೆಂಗಳೂರಿನ ಅಭಿವೃದ್ಧಿ ದೃಷ್ಟಿಯಿಂದ ಕಾಂಗ್ರೆಸ್‌ಗೆ ಬೆಂಬಲ ಸೂಚಿಸುವುದಾಗಿ ಹೇಳಿಕೆ ನೀಡಿದ್ದರು. 

ವೆಬ್ದುನಿಯಾವನ್ನು ಓದಿ