ಆ ಖರೀದಿ ವೇಳೆಯಲ್ಲಿ ಒಂದು ಗುಂಟೆ ಭೂಮಿಗೆ 11025ರೂ ನೀಡಿ ಖರೀದಿಸಲಾಗಿತ್ತು. ಆದರೆ ಇದು ಸರ್ಕಾರಿ ಮೌಲ್ಯಕ್ಕಿಂತಲೂ ಕಡಿಮೆ ಇದ್ದು ನನಗೆ ನೀಡಿರುವ ಪರಿಹಾರ ಸೂಕ್ತವಲ್ಲ ಎಂದು ಸರ್ಕಾರದ ವಿರುದ್ಧ ಭೂಮಿ ನೀಡಿದ್ದ ರೈತ ಸೂಕ್ತ ಪರಿಹಾರ ಕೊಡಿಸುವಂತೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಒಂದು ಗುಂಟೆಗೆ 21648 ರೂ. ಪರಿಹಾರ ನೀಡುವಂತೆ ಸೂಚಿಸಿ 2014ರ ಜನವರಿಯಲ್ಲಿ ಆದೇಶಿಸಿತ್ತು.
ಹೀಗೆ ಒಟ್ಟು 1 ಕೋಟಿ 64 ಲಕ್ಷ ಪರಿಹಾರ ನೀಡಲು ತೀರ್ಪಿತ್ತಿತ್ತು. ಆದರೆ ಈ ಹಣವನ್ನು ಮತ್ತೊಂದು ಇಲಾಖೆ ನೀಡಲಿದೆ. ಇದು ನಮಗೆ ಸಂಬಂಧಿಸಿದ್ದಲ್ಲ. ಎಸಿ ಕಚೇರಿಗೆ ಸಂಬಂಧಿಸಿದ್ದಾಗಿದೆ ಎಂದು ಪಂಚಾಯತ್ ಇಲಾಖೆ ಅಧಿಕಾರಿಗಳು ಪರಿಹಾರ ನೀಡಲು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶಕ್ಕೆ ತಕ್ಕಂತೆ ನಡೆದುಕೊಳ್ಳದೆ, ಪರಿಹಾರವನ್ನೂ ನೀಡದೆ ಸತಾಯಿಸುತ್ತಿದ್ದು, ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದೇ ನಗರದಲ್ಲಿನ ಪಂಚಾಯತ್ ರಾಜ್ ಕಚೇರಿಯನ್ನು ಜಪ್ತಿ ಮಾಡಿಕೊಳ್ಳಿ ಎಂದು ನ್ಯಾಯಾಲಯ ಆದೇಶ ಹೊರಡಿಸಿದೆ.
ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಸಿಬ್ಬಂದಿಗಳು ಇಂದು ಇಲಾಖೆಯ ಕಟ್ಟಡಕ್ಕೆ ಮುತ್ತಿಗೆ ಹಾಕಿದ್ದು, ಸಂಪೂರ್ಣವಾಗಿ ಜಪ್ತಿ ಮಾಡಿಕೊಂಡಿದ್ದಾರೆ. ಈ ವೇಳೆ ಕೋರ್ಟ್ ಸಿಬ್ಬಂದಿ ಹಾಗೂ ಸರ್ಕಾರಿ ವಕೀಲರ ನಡುವೆ ಕೆಲ ಹೊತ್ತಿನ ವಾದ-ವಿವಾದಗಳು ನಡೆದವು. ಆದರೂ ಕಚೇರಿಯನ್ನು ಜಪ್ತಿ ಮಾಡುವಲ್ಲಿ ನ್ಯಾಯಾಲಯದ ಸಿಬ್ಬಂದಿ ಯಶಸ್ವಿಯಾದರು.