ಉತ್ತರ ಕರ್ನಾಟಕಕ್ಕೆ ತಾರತಮ್ಯವಿಲ್ಲ ಎಂದ ಸಿಎಂ: ಶೆಟ್ಟರ್ ಸಭಾತ್ಯಾಗ

ಶುಕ್ರವಾರ, 19 ಡಿಸೆಂಬರ್ 2014 (14:05 IST)
ಇಲ್ಲಿ ನಡೆಯುತ್ತಿರುವ ವಿಧಾನಸಭಾ ಕಲಾಪದಲ್ಲಿ ಉತ್ತರ ಕರ್ನಾಟಕಕ್ಕೆ ಯಾವುದೇ ರೀತಿಯಾಗಿ ತಾರತಮ್ಯ ಮಾಡುತ್ತಿಲ್ಲ ಎಂಬ ಸಿಎಂ ಸಿದ್ದರಾಮಯ್ಯನವರ ಹೇಳಿಕೆಗೆ ಅಸಮಧಾನಗೊಂಡ ವಿರೋಧ ಪಕ್ಷ ನಾಯಕ ಜಗದೇಶ್ ಶೆಟ್ಟರ್ ಸಭಾತ್ಯಾಗ ಮಾಡಿದರು.
 
ಪ್ರಶ್ನೋತ್ತರ ವೇಳೆಯಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುತ್ತಿತ್ತು. ಈ ವೇಳೆ ಮಾತನಾಡುತ್ತಿದ್ದ ಸಿಎಂ ಸಿದ್ದರಾಮಯ್ಯ, ಈ ಹಿಂದೆ ಶಾಸಕರು ಸದನದಲ್ಲಿ ಕೇಳಿದ್ದ ಪ್ರಶ್ನೆಗೆ ಉತ್ತರಿಸುತ್ತಿದ್ದರು. 
ಆಗ ವಿಪಕ್ಷ ನಾಯಕ ಶೆಟ್ಟರ್, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಯಾವುದೇ ಯೋಜನೆಗಳನ್ನು ಜಾರಿಗೆ ತರದೆ ಅನ್ಯಾಯ ಎಸಗಲಾಗುತ್ತಿದೆ ಎಂದು ಆರೋಪಿಸಿದರು. ಬಳಿಕ ಉತ್ತರಿಸಿದ ಸಿದ್ದರಾಮಯ್ಯ ಇಡೀ ಕರ್ನಾಟಕವನ್ನು ಒಂದೇ ತೆರನಾಗಿ ಕಾಣಲಾಗುತ್ತಿದ್ದು, ಅಖಂಡ ರಾಜ್ಯದ ಅಭಿವೃದ್ಧಿಯೇ ಸರ್ಕಾರದ ಗುರಿ. ಇದರಲ್ಲಿ ಉತ್ತರ ಕರ್ನಾಟಕಕ್ಕೆ ತಾರತಮ್ಯ ಎಸಗಲಾಗುತ್ತಿದೆ ಎಂಬ ಪ್ರಮೇಯವೇ ಇಲ್ಲ ಎಂದರು. ಆದರೆ ಸಿಎಂ ಹೇಳಿಕೆಗೆ ತೃಪ್ತಿಪಡದ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. 
 
ಆದರೆ, ಗದ್ದಲದ ನಡುವೆಯೂ ಕೂಡ ಸರ್ಕಾರ ಮೂರು ವಿಧೇಯಕಗಳನ್ನು ಮಂಡಿಸಿತು. ಇದರಿಂದ ಅಸಮಧಾನಗೊಂಡ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಸಭಾತ್ಯಾಗ ಮಾಡಿದರು.  

ವೆಬ್ದುನಿಯಾವನ್ನು ಓದಿ