ಆಯುಕ್ತ ಬದಲಾವಣೆ ಸದ್ಯಕ್ಕಿಲ್ಲ: ಜಾರ್ಜ್

ಶನಿವಾರ, 28 ಫೆಬ್ರವರಿ 2015 (12:18 IST)
ರಾಜ್ಯದ ಪೊಲೀಸ್ ಮಹಾ ನಿರ್ದೇಶಕರ ನೇಮಕ ವಿಚಾರದ ಬೆನ್ನಲ್ಲೇ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಬದಲಾವಣೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಕೆ.ಜೆ.ಜಾರ್ಜ್, ಆಯುಕ್ತ ಎಂ.ಎನ್.ರೆಡ್ಡಿ ಅವರ ಬದಲಾವಣೆ ವಿಚಾರ ಸದ್ಯಕ್ಕಿಲ್ಲ ಎಂದಿದ್ದಾರೆ.  
 
ಆಯುಕ್ತ ರೆಡ್ಡಿ ಅವರಿಗೆ ಸದ್ಯದಲ್ಲೇ ಬಡ್ತಿ ದೊರೆಯುವ ಸಾಧ್ಯತೆಗಳಿವೆ ಎನ್ನಲಾಗುತ್ತಿದ್ದು, ಬೇರೆ ಎಡಿಜಿಪಿ ದರ್ಜೆಯ ಅಧಿಕಾರಿಯೋರ್ವರನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತರನ್ನಾಗಿ ನೇಮಿಸುವ ಸಾಧ್ಯತೆ ಇದೆಯೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸದ್ಯಕ್ಕೆ ಬದಲಾವಣೆ ಸಾಧ್ಯತೆ ಇಲ್ಲ. ಒಂದು ವೇಳೆ ಇದ್ದಲ್ಲಿ ಆ ಬಗ್ಗೆ ಸಿಎಂ ಸಿದ್ದರಾಮಯ್ಯನವರೇ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.
 
ಬಳಿಕ ಮಾತನಾಡಿದ ಅವರು, ಮಂಗಳೂರಿನಲ್ಲಿ ಚರ್ಚ್ ದಾಳಿ ನಡೆದಿಲ್ಲ. ಅಲ್ಲದೆ ದಾಳಿ ನಡೆದಿದೆ ಎನ್ನಲಾದ ಜಾಗ ಚರ್ಚ್ ಅಲ್ಲ. ಅದೊಂದು ಕೇವಲ ಪ್ರಾರ್ಥನಾ ಮಂದಿರವಷ್ಟೇ. ಆದರೆ ಕಟ್ಟಡದ ಕಿಟಕಿ ಗಾಜನ್ನು ಯಾರೋ ಕಿಡಿಗೇಡಿಗಳು ಹೊಡೆದು ಪುಡಿ ಮಾಡಿರುವುದು ನಿಜ. ಆ ಬಗ್ಗೆ ನಗರದ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದ್ದು, ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು. 

ವೆಬ್ದುನಿಯಾವನ್ನು ಓದಿ