ನನ್ನ ಮೇಲೆ ದಾಳಿ ನಡೆದಿಲ್ಲ, ಅವೆಲ್ಲಾ ಕೇವಲ ವದಂತಿ: ಮುತ್ತಪ್ಪ ರೈ
ಗುರುವಾರ, 18 ಸೆಪ್ಟಂಬರ್ 2014 (12:34 IST)
ಜಯಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ ಮೇಲೆ ದಾಳಿ ನಡೆದಿದೆ ಎಂಬ ಸುದ್ದಿ ವ್ಯಾಪಿಸಿರುವ ಹಿನ್ನೆಲೆಯಲ್ಲಿ ಇದು ಕೇವಲ ವದಂತಿ, ನನ್ನ ಮೇಲೆ ಯಾವುದೇ ದಾಳಿ ನಡೆದಿಲ್ಲ ಎಂದು ಮುತ್ತಪ್ಪ ರೈ ಸ್ಪಷ್ಟನೆ ನೀಡಿದ್ದಾರೆ.
ಮುತ್ತಪ್ಪ ರೈ ಮೇಲೆ ದಾಳಿ ನಡೆದಿದೆ ಎಂಬ ವದಂತಿ ಹಬ್ಬಿತ್ತು. ಈ ಕುರಿತು ಸುದ್ದಿವಾಹಿನಿಗೆ ಪ್ರತಿಕ್ರಿಯೆ ನೀಡಿ, ಇದೊಂದು ಅಪಪ್ರಚಾರವಾಗಿದ್ದು, ಅನೇಕ ಜನರು ಈ ಬಗ್ಗೆ ಕರೆ ಮಾಡಿ ವಿಚಾರಿಸಿಕೊಂಡು ನಾನು ಕ್ಷೇಮವಾಗಿದ್ದೇನೆ ಎಂದು ತಿಳಿದು ನಿಟ್ಟುಸಿರುಬಿಟ್ಟಿದ್ದಾರೆ.
ಈ ರೀತಿಯ ವದಂತಿ ಹಬ್ಬಿಸುವುದು ಯಾರೆಂದು ಗೊತ್ತಾಗುತ್ತಿಲ್ಲ. ಅವರಿಗೆ ದೇವರು ಒಳ್ಳೇದು ಮಾಡಲಿ ಎಂದು ಮುತ್ತಪ್ಪ ರೈ ಹೇಳಿದರು. ಭೂಗತಲೋಕದ ಮಾಜಿ ಪಾತಕಿಯಾಗಿದ್ದ ಮುತ್ತಪ್ಪ ರೈ ಈಗ ಹಿಂಸೆಯನ್ನು ತ್ಯಜಿಸಿ ಸಾಮಾನ್ಯ ಜೀವನ ನಡೆಸುತ್ತಿದ್ದಾರೆ.