ಮಥಾಯಿ ವರ್ಗಾವಣೆ ಸರಿಯಲ್ಲ: ಅಭಿಪ್ರಾಯ ಹೊರಹಾಕಿದ ಲೋಕಾಯುಕ್ತರು

ಶನಿವಾರ, 28 ಮಾರ್ಚ್ 2015 (16:06 IST)
ಬಿಬಿಎಂಪಿಯ ಜಾಹೀರಾತು ವಿಭಾಗದ ಸಹಾಯಕ ಆಯುಕ್ತ ಮಥಾಯಿ ಅವರ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದ ಉಪ ಲೋಕಾಯುಕ್ತ ಸುಭಾಷ್ ಬಿ. ಅಡಿ ಅವರು ಪ್ರತಿಕ್ರಿಯಿಸಿದ್ದು, ವರ್ಗಾವಣೆಯಲ್ಲಿ ನಮ್ಮ ಹಸ್ತಕ್ಷೇಪವಿಲ್ಲ. ಅಲ್ಲದೆ ತನಿಖೆ ವೇಳೆ ಇದು ಸೂಕ್ತವಲ್ಲ ಎಂದಿದ್ದಾರೆ. 
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಯುಕ್ತರು ನೀಡಿದ ದೂರಿನ ಹಿನ್ನೆಲೆಯಲ್ಲಿ ಬಿಬಿಎಂಪಿಯ ಜಾಹೀರಾತು ವಿಭಾಗದಲ್ಲಿ ನಡೆದಿದೆ ಎನ್ನಲಾದ ಹಗರಣಗಳ ತನಿಖೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ  ಮಥಾಯಿ ಅವರಿಂದ ಹಗರಣಕ್ಕೆ ಸಂಬಂಧಿಸಿದಂತೆ ಕೆಲ ಮಾಹಿತಿಗಳನ್ನು ಪಡೆಯಬೇಕಿದೆ. ಆದರೆ ತನಿಖೆಯು ಪ್ರಗತಿಯಲ್ಲಿರುವಾಗ ವರ್ಗಾವಣೆ ಮಾಡುತ್ತಿರುವುದು ಸರಿಯಲ್ಲ ಎಂದರು.  
 
ಬಳಿಕ, ಮಾರ್ಚ್ 31ರಂದು ಮಥಾಯಿ ಅವರು ಕಚೇರಿಗೆ ಆಗಮಿಸಿ ಖುದ್ದು ಹೇಳಿಕೆ ದಾಖಲಿಸುವಂತೆ ಪಾಲಿಕೆ ಆಯುಕ್ತರ ಮೂಲಕ ಸೂಚಿಸಿರುವುದಾಗಿ ತಿಳಿಸಿದರು. 
 
ಪಾಲಿಕೆಯ ಜಾಹೀರಾತು ವಿಭಾಗಕ್ಕೆ ಸಂಬಂಧಿಸಿದಂತೆ ಮಥಾಯಿ ಅವರು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಅಲ್ಲದೆ ಸ್ಥಾಯಿ ಸಮಿತಿ ಸದಸ್ಯರ ಅನುಮತಿ ಇಲ್ಲದೆ ಜನಪ್ರತಿನಿಧಿಗಳ ವಿರುದ್ಧ ದೂರು ದಾಖಲಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಭೆ ನಡೆಸಿದ್ದ ಪಾಲಿಕೆಯ ಸ್ಥಾಯಿ ಸಮಿತಿಯ ಸದಸ್ಯರು, ಮಥಾಯಿ ಅವರ ವರ್ಗಾವಣೆಗೆ ಬೇಕಾದ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ