ಕೋಲಾರದ ಅಭಿಮಾನಿಗಳಿಂದ ಡಿ.ಕೆ.ರವಿಗೆ ಶ್ರದ್ಧಾಂಜಲಿ

ಗುರುವಾರ, 26 ಮಾರ್ಚ್ 2015 (17:20 IST)
ದಕ್ಷ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರು ಸಾವನ್ನಪ್ಪಿ ಇಂದಿಗೆ 11 ದಿನಗಳು ಕಳೆದಿದ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲೆಯ ಅವರ ಅಭಿಮಾನಿಗಳು ಹಲವು ಸಾಮಾಜಿಕ ಕಳಕಳಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ತಮ್ಮ ನೆಚ್ಚಿನ ನಾಯಕನ ಪುಣ್ಯ ತಿಥಿಯನ್ನು ಆಚರಿಸಿ  ಹೃದಯಪೂರ್ವಕ ಶ್ರದ್ಧಾಂಜಲಿ ಸಲ್ಲಿಸಿದರು.  
 
ಇಂದು ರವಿ ಅವರ ಹೆಸರಿನಲ್ಲಿ ಜಿಲ್ಲೆಯ ಹಲವೆಡೆ ರಕ್ತದಾನ ಮತ್ತು ಅನ್ನದಾನದಂತಹ ಸಾಮಾಜಿಕ ಕಳಕಳಿ ಕೆಲಸಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ರವಿ ಅವರ ಭಾವಚಿತ್ರವು ಜಿಲ್ಲೆಯ ಹಲವು ಗ್ರಾಮಗಳಲ್ಲಿ ರಾರಾಜಿಸುತ್ತಿತ್ತು. 
 
ವಿಶೇಷವೆಂದರೆ ರವಿ ಅವರ ಅಭಿಮಾನಿಗಳಲ್ಲಿ ಇಬ್ಬರು ವೈದ್ಯರು ಸಾರ್ವಜನಿಕರಿಗೆ ಉಚಿತ ಆರೋಗ್ಯ ಸೇವೆ ಸಲ್ಲಿಸಲು ನಿರ್ಧರಿಸಿದ್ದು, ಅಂಬುಲನ್ಸ್ ಸೇವೆಯನ್ನೂ ಆರಂಭಿಸಿದ್ದಾರೆ.  
 
ಇನ್ನು ಇಂದು ಸಂಜೆ ಹರಿಕಥೆ ಹಾಗೂ ಸಾಮಾಜಿಕ ನಾಟಕಗಳನ್ನೂ ಕೂಡ ಆಯೋಜಿಸಲಾಗಿದ್ದು, ಸಾರ್ವಜನಿಕವಾಗಿ ಪ್ರದರ್ಶಿಸಲಾಗುತ್ತಿದೆ. ಈ ಮೂಲಕ ತಮ್ಮ ನೆಚ್ಚಿನ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. 
 
ರವಿ ಅವರು ಈ ಹಿಂದೆ ಕೋಲಾರದ ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ತಮ್ಮ ಕಾರ್ಯ ವೈಖರಿಯಿಂದಲೇ ಜನರ ಮನ ಗೆದ್ದಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಅವರ ಅಭಿಮಾನಿಗಳು ಇಂದು ಹೃದಯಪೂರ್ವಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.   

ವೆಬ್ದುನಿಯಾವನ್ನು ಓದಿ