ಸೋಲಿಗೆ ಪರಮೇಶ್ವರ್ ನಾಯ್ಕ ಕಾರಣ: ಅನಿಲ್ ಲಾಡ್

ಬುಧವಾರ, 24 ಫೆಬ್ರವರಿ 2016 (12:49 IST)
ಬಳ್ಳಾರಿಯಲ್ಲಿ ಕಾಂಗ್ರೆಸ್‌ಗೆ ಆದ ಹಿನ್ನೆಡೆಗೆ ಶಾಸಕ ಅನಿಲ್ ಲಾಡ್ ಸಚಿವ ಪಿ.ಟಿ. ಪರಮೇಶ್ವರ್ ನಾಯ್ಕ ಅವರನ್ನು ಹೊಣೆಗಾರರಾಗಿಸಿದ್ದಾರೆ. 
 
ಸೋಲಿಗೆ ಟಿಕೆಟ್ ಹಂಚಿಕೆಯಲ್ಲಾದ ಏಕಪಕ್ಷೀಯ ನಿರ್ಧಾರವೇ ಕಾರಣ ಎಂದು ಬಳ್ಳಾರಿ ನಗರ ಶಾಸಕ ಅನಿಲ್ ಲಾಡ್ ಕಿಡಿಕಾರಿದ್ದಾರೆ.
 
ಸಂಡೂರಿನಲ್ಲಿ ಮಾತನಾಡುತ್ತಿದ್ದ ಲಾಡ್, ಜಿಲ್ಲಾ ಉಸ್ತುವಾರಿ ಸಚಿವರಾದ ಪಿ. ಟಿ. ಪರಮೇಶ್ವರ ನಾಯ್ಕ ಶಾಸಕರ, ಮುಖಂಡರ ಮಾತಿಗೆ ಬೆಲೆ ಕೊಡದೆ ತಮಗೆ ಬೇಕಾದವರಿಗೆ ಟಿಕೆಟ್ ಹಂಚಿಕೆ ನೀಡಿದರು. ಹೀಗಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪರಿಣಾಮಕಾರಿ ಪ್ರದರ್ಶನ ನೀಡಲು ಸೋತಿದೆ ಎಂದು ಹೇಳಿದ್ದಾರೆ. 
 
ಇದು ನನ್ನೊಬ್ಬನ ನೋವಲ್ಲ. ಜಿಲ್ಲೆಯ ಎಲ್ಲರಿಗೂ ಇದರಿಂದ ನೋವಾಗಿದೆ. ಅವರು ನಮ್ಮ ಜಿಲ್ಲೆಯವರಲ್ಲ. ಮೊದಲು ಅವರನ್ನು ಬದಲಾವಣೆ ಮಾಡಲಿ. ಈ ಕುರಿತು ರಾಜ್ಯದ ವರಿಷ್ಟರು ಕ್ರಮ ಕೈಗೊಳ್ಳದಿದ್ದರೆ ನಾವು ಹೈಕಮಾಂಡ್ ಮೊರೆ ಹೋಗುತ್ತೇವೆ ಎಂದು ಲಾಡ್ ಗುಡುಗಿದ್ದಾರೆ. 
 
ಬಳ್ಳಾರಿ ಜಿಲ್ಲೆಯಲ್ಲಿ 40 ಜಿಲ್ಲಾ ಪಂಚಾಯಿತಿ ಸ್ಥಾನಗಳಲ್ಲಿ 17 ಸ್ಥಾನಗಳನ್ನು ಗಳಿಸಿದ್ದು, ತಾಲೂಕು ಪಂಚಾಯತಿ 150 ಸ್ಥಾನಗಳಲ್ಲಿ 57 ಸ್ಥಾನಗಳನ್ನು ಗೆದ್ದಿದೆ. ಜಿಲ್ಲೆಯಲ್ಲಿ ಬಿಜೆಪಿ ಪ್ರಾಬಲ್ಯವನ್ನು ಮೆರೆದಿದೆ. 

ವೆಬ್ದುನಿಯಾವನ್ನು ಓದಿ