ಪರಮೇಶ್ವರ್‌ಗೆ ಸೂಕ್ತ ಸ್ಥಾನಮಾನ ಶೀಘ್ರಧಲ್ಲಿ ತೀರ್ಮಾನ: ಸಿಎಂ

ಬುಧವಾರ, 27 ಆಗಸ್ಟ್ 2014 (15:47 IST)
ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ ಅವರಿಗೆ ಉಪಮುಖ್ಯ ಮಂತ್ರಿ ಸ್ಥಾನ ನೀಡುವ ವಿಚಾರವನ್ನು ಎಐಸಿಸಿ ಜತೆ ಚರ್ಚಿಸಿ ಸಿಎಂ ಸಿದ್ದರಾಮಯ್ಯ ನಿರ್ಧರಿಸುತ್ತಾರೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
 
ಸಮನ್ವಯ ಸಮಿತಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯರಾಜಕೀಯ ವಿದ್ಯಮಾನಗಳ ಪ್ರಶ್ನೆ ಪ್ರಸ್ತಾಪವಾಗುತ್ತಿದ್ದಂತೆ ಚುಟುಕು ಉತ್ತರ ನೀಡಿ ಗೋಷ್ಠಿ ಮುಗಿಸಲು ಮುಂದಾದರು.  ಸಿಎಂ ಸಿದ್ದರಾಮಯ್ಯನವರಂತೂ ಪತ್ರಿಕಾಗೋಷ್ಠಿಯುದ್ದಕ್ಕೂ ಮೌನವಾಗಿದ್ದರು. ಸಂಪುಟ ವಿಸ್ತರಣೆ ಸಿದ್ದರಾಮಯ್ಯ ಅವರಿಗೆ ಬಿಟ್ಟ ವಿಚಾರ. ಉಪಮುಖ್ಯಮಂತ್ರಿ ಹುದ್ದೆಯನ್ನೂ ಅವರೇ ನಿರ್ಧರಿಸುತ್ತಾರೆ ಎಂದು ದಿಗ್ವಿಜಯ್ ಹೇಳಿದರು. ಆದರೆ ಸಿದ್ದರಾಮಯ್ಯ ಈ ವಿಚಾರ ಹೈಕಮಾಂಡ್‌ಗೆ ಬಿಟ್ಟಿದ್ದು ಎನ್ನುತ್ತಾರಲ್ಲಾ ಎಂದು ಪ್ರಶ್ನಿಸಿದಾಗ, ಎಐಸಿಸಿ ಜತೆ ಚರ್ಚಿಸಿ ನಿರ್ಧರಿಸುತ್ತಾರೆ ಎಂದು ಜಾರಿಕೊಂಡರು.
 
ಬಳ್ಳಾರಿ, ಚಿಕ್ಕೋಡಿ ವಿಧಾನಸಭಾ ಕ್ಷೇತ್ರದ ಗೆಲವು ಹಾಗೂ ಶಿಕಾರಿಪುರದಲ್ಲಿ ಅಲ್ಪಮತಗಳ ಅಂತರದ ಸೋಲಿನಿಂದ ದೇಶದಲ್ಲಿ ಸೋ ಕಾಲ್ಡ್ ಮೋದಿ ಅಲೆ ಇದೆ ಎಂಬ ಭ್ರಮೆ ಕಳಚಿದೆ. ಅಷ್ಟು ಮಾತ್ರವಲ್ಲ ಕಾಂಗ್ರೆಸ್ ಬೇರುಗುಳ ಇನ್ನೂ ಗಟ್ಟಿಯಾಗಿವೆ ಎಂಬುದಕ್ಕೆ ಇದು ಸಾಕ್ಷಿ ಎಂದು ಹೇಳಿದರು.
 
ರಾಜ್ಯ ಸರ್ಕಾರ ಜನತೆಗೆ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸುತ್ತಿದೆ. ಬಿಬಿಎಂಪಿ ವಿಭಜನೆ ಬಗ್ಗೆ ಪ್ರಣಾಳಿಕೆಯಲ್ಲಿ ಭರವಸೆ ನೀಡಿರುವುದರಿಂದ ಈ ಬಗ್ಗೆ ವರದಿ ತಯಾರಿಸಲು ತಜ್ಞರ ಸಮಿತಿ ರಚಿಸುವಂತೆ ಸಿಎಂ ಬಳಿ ಪ್ರಸ್ತಾಪಿಸಿದ್ದೇನೆ. ಪಂಚಾಯತ್ ಚುನಾವಣೆಗೂ ಸಿದ್ಧತೆ ನಡೆಸಲಾಗುತ್ತಿದೆ. ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಲು ಹೋಬಳಿ ಮಟ್ಟದಿಂದ ಸಮೂಹ ಸಂಪರ್ಕ ಕಾರ್ಯಕ್ರಮ ಜಾರಿಗೆ ತರಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಡಿ.31ರವರೆಗ ಕಾಂಗ್ರ್‌ಸ ಸದಸ್ಯತ್ವ ನೋಂದಣಿ ಅಭಿಯಾನ ನಡೆಯುತ್ತದೆ. ಬಳಿಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡುವಂತೆ ಸೂಚನೆ ನೀಡಿದ್ದೇನೆ ಎಂದರು.

ವೆಬ್ದುನಿಯಾವನ್ನು ಓದಿ