ಜೆಡಿಎಸ್ ಕಚೇರಿಯ ಕಿಲಿ ಕೈ ಇಂದಿನಿಂದ ಪರಮೇಶ್ವರ್ ಕೈಯ್ಯಲ್ಲಿ...?!

ಭಾನುವಾರ, 15 ಫೆಬ್ರವರಿ 2015 (13:35 IST)
ಕಳೆದ ನಾಲ್ಕು ದಶಕಗಳಿಂದ ಭಾವನಾತ್ಮಕವಾಗಿ ಸಂಬಂಧ ಹೊಂದಿದ್ದ ನಗರದ ರೇಸ್ ಕೋರ್ಸ್ ರಸ್ತೆಯಲ್ಲಿನ ತಮ್ಮ ಪಕ್ಷದ ಪ್ರಾದೇಶಿಕ ಕಚೇರಿಯನ್ನು ಅಧಿಕೃತವಾಗಿ ಇಂದು ಕಾಂಗ್ರೆಸ್‌ಗೆ ಹಸ್ತಾಂತರಿಸುವುದಾಗಿ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ತಿಳಿಸಿದ್ದಾರೆ.

ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಗೌಡರು, ಈ ಕಚೇರಿಗೂ ನನಗೂ ಭಾವನಾತ್ಮಕ ಸಂಬಂಧವಿತ್ತು. ಆದರೆ ನ್ಯಾಯಾಲಯದ ತೀರ್ಪಿಗೆ ತಲೆ ಬಾಗಿ ಈ ಕಚೇರಿಯನ್ನು ಇಂದು ಕಾಂಗ್ರೆಸ್ ಪಕ್ಷಕ್ಕೆ ವಹಿಸುತ್ತಿದ್ದು, ಪಕ್ಷದ ರಾಜ್ಯಾಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರಿಗೆ ಕಚೇರಿಯ ಕೀ ಹಸ್ತಾಂತರಿಸುವುದಾಗಿ ತಿಳಿಸಿದರು.

ಬಳಿಕ ಮಾತನಾಡಿದ ಅವರು, ನಮ್ಮ ಪಕ್ಷಕ್ಕೆ ಸೇರಿದ ಕೆಲವು ಪೀಟೋಪಕರಣಗಳನ್ನು ಇಲ್ಲಿಯೇ ಇಡಲಾಗಿದ್ದು, ನಾವು ಮತ್ತೊಂದು ಕಚೇರಿಯನ್ನು ತೆರೆದ ಬಳಿಕ ಅವುಗಳನ್ನು ತೆಗೆದುಕೊಂಡು ಹೋಗುತ್ತೇವೆ. ಅಲ್ಲಿಯ ವರೆಗೂ ಇವು ಇಲ್ಲಿಯೇ ಇರಲಿವೆ ಎಂದರು.

ಇನ್ನು ಈ ಕಚೇರಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನ್ಯಾಯಾಲಯ ಮೆಟ್ಟಿಲೇರಿ ಕಚೇರಿ ನಮ್ಮದು ಎಂದು ವಾದಿಸಿತ್ತು. ವಾದ ವಿವಾದಗಳನ್ನು ಆಲಿಸಿದ್ದ ಸುಪ್ರೀಂ ಕೋರ್ಟ್, ಕಚೇರಿ ಕಾಂಗ್ರೆಸ್ ಸೇರಿದ್ದಾಗಿದ್ದು, ಅದನ್ನು ಕಾಂಗ್ರೆಸ್‌ಗೆ ವಹಿಸುವಂತೆ ಕಳೆದ ಡಿಸೆಂಬರ್ ತಿಂಗಳಿನಲ್ಲಿ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಗೌಡರು ಅಧಿಕೃತವಾಗಿ ಇಂದು ಕಾಂಗ್ರೆಸ್ ತೆಕ್ಕೆಗೆ ಒಪ್ಪಿಸಲಿದ್ದಾರೆ.

ವೆಬ್ದುನಿಯಾವನ್ನು ಓದಿ