ಮೈಸೂರು ಅರಮನೆಯ ರಾಜವಂಶಸ್ಥರ ನೂತನ ಉತ್ತರಾಧಿಕಾರಿ ನೇಮಕಗೊಂಡಿರುವ ಯದುವೀರ್ ಅವರ ಪಟ್ಟಾಭಿಷೇಕಕ್ಕೆ ಎಲ್ಲಾ ರೀತಿಯ ಸಿದ್ಧತೆ ನಡೆದಿದ್ದು, ಇನ್ನು ಕೇವಲ ಮೂರೇ ಮೂರು ದಿನ ಉಳಿದಿದೆ. ಆದರೆ ಪ್ರಸ್ತುತದ ಪ್ರಶ್ನೆ ಪಟ್ಟಾಭಿಷೇಕದ ವೇಳೆ ಬಳಸುವ ಪಟ್ಟದ ಆನೆ ಯಾವುದು ಎಂಬುದು.
ಹೀಗಿರುವಾಗ ಮಹಾರಾಣಿ ಪ್ರಮೋದಾದೇವಿ ಒಡೆಯರ್ ಅವರು ಮತ್ತಿಗೋಡು ಶಿಬಿರದಲ್ಲಿರುವ 12 ಅಂಬಾರಿಯನ್ನು ಹೊತ್ತು ಯಶಸ್ವಿ ದಸರಾಗೆ ಸಹಕರಿಸಿದ ಶಾಂತ ಸ್ವಭಾವದ ಬಲರಾಮನನ್ನೇ ಕಳುಹಿಸುವಂತೆ ಜಿಲ್ಲಾಧಿಕಾರಿ ಸಿ. ಶಿಖಾ ಹಾಗೂ ಅರಣ್ಯ ಇಲಾಖೆಗೆ ಪತ್ರ ಬರೆದು ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ. ಆದರೆ ಪ್ರಸ್ತುತ ಬಲರಾಮನಿಗೂ ಕೂಡ ಮದವೇರಿದ್ದು ಅವನನ್ನು ನಿಯಂತ್ರಿಸುವುದೂ ಅರಣ್ಯ ಇಲಾಖೆಗೆ ತಲೆನೋವಾಗಿದೆ.
ಮಹಾರಾಜರ ಪಟ್ಟಾಭಿಷೇಕಕ್ಕೆ ಇನ್ನೂ ಮೂರೇ ದಿನಗಳು ಮಾತ್ರ ಇದ್ದು, ಪಟ್ಟದ ಕುದುರೆ, ಪಟ್ಟದ ಹಸು, ಪಟ್ಟದ ಒಂಟೆ ಎಲ್ಲವೂ ಸಿದ್ಧವಾಗಿವೆ. ಆದರೆ, ಪಟ್ಟದ ಆನೆ ಯಾವುದೆಂಬುದೇ ಎಲ್ಲರಿಗೂ ತಲೆನೋವಾಗಿ ಪರಿಣಮಿಸಿರುವ ವಿಷಯ.