ಒಂದು ಕೋಟಿ ಮೋಸ ಮಾಡಿದ ಮಳೆ ಹುಡುಗಿ ಪೂಜಾ...?!

ಶನಿವಾರ, 27 ಜೂನ್ 2015 (11:30 IST)
ಮುಂಗಾರು ಮಳೆ ಖ್ಯಾತಿಯ ಮಳೆ ಹುಡುಗಿ ನಟಿ ಪೂಜಾಗಾಂಧಿ ಅವರು ತಮ್ಮಿಂದ ಒಂದು ಕೋಟಿ ರೂ. ಹಣ ಪಡೆದಿದ್ದು, ಅದನ್ನು ವಾಪಾಸ್ ಕೊಡಿಸುವಂತೆ ಕೋರಿ ಪೋಷಕ ನಟ ಹಾಗೂ ನಿರ್ಮಾಪಕ ಡಾ.ಸುರೇಶ್ ಶರ್ಮಾ ಅವರು ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಗೆ ಇಂದು ದೂರು ನೀಡಿದ್ದಾರೆ. 
 
ಶರ್ಮಾ ದೂರಿನಲ್ಲಿ ಏನಿದೆ ?:
ನಟಿ ಪೂಜಾಗಾಂಧಿ ಹಾಗೂ ಅವರ ತಂದೆ ಪವನ್ ಗಾಂಧಿ ಇಬ್ಬರೂ ಕೂಡ ತಮ್ಮ ಅಭಿನೇತ್ರಿ ಚಿತ್ರದ ಚಿತ್ರೀಕರಣ ವೇಳೆ ತಮ್ಮಿಂದ 1 ಕೋಟಿ ರೂ. ಹಣ ಪಡೆದಿದ್ದರು. ಅಲ್ಲದೆ ಅದನ್ನು ಚಿತ್ರದ ಸ್ಯಾಟಲೈಟ್ ಹಕ್ಕನ್ನು ಮಾರಾಟ ಮಾಡಿ ಬಳಿಕ ಹಿಂತಿರುಗಿಸುವುದಾಗಿ ತಿಳಿಸಿದ್ದರು. ಆದರೆ ಇಲ್ಲಿಯವರೆಗೂ ಕೂಡ ಇಬ್ಬರೂ ಕೈಗೆ ಸಿಗದೆ ತಲಪ್ಪಿಸಿಕೊಂಡು ಓಡಾಡುತ್ತಿದ್ದಾರೆ ಎಂದು ದೂರಿರುವ ಅವರು, ಪೂಜಾ ಗಾಂಧಿ ಅವರು ಸಾಧನೆಯ ಉತ್ತುಂಗದಲ್ಲಿದ್ದಾರೆ. ಆದ್ದರಿಂದ ಅವರು ಮತ್ತೆ ಹಿಂದಿರುಗಿಸುತ್ತಾರೆ ಎಂಬ ನಂಬಿಕೆಯಿಂದ ನಾನು ಅವರಿಗೆ ಹಣ ನೀಡಿದ್ದೆ. ಆದರೆ ನಾನು ನೀಡಿದ್ದ ಹಣ ನನಗೆ ಇನ್ನೂ ವಾಪಾಸಾಗಿಲ್ಲ. ಆದ್ದರಿಂದ ತಮ್ಮಲ್ಲಿ ದೂರು ನೀಡುತ್ತಿದ್ದು, ಕೊಡಿಸಿಕೊಡಬೇಕೆಂದು ಮಂಡಳಿಗೆ ಮನವಿ ಮಾಡಿದ್ದಾರೆ.  
 
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಪೂಜಾಗಾಂಧಿ ಅವರೇ ಪ್ರತಿಕ್ರಿಯಿಸಿದ್ದು, ಇದು ನನ್ನ ಮೇಲೆ ಮಾಡಲಾಗುತ್ತಿರುವ ಬಹುದೊಡ್ಡ ಸುಳ್ಳು ಆರೋಪ. ಶರ್ಮಾ ಹಾಗೂ ನನ್ನ ನಡುವೆ ಯಾವುದೇ ರೀತಿಯ ಹಣಕಾಸಿನ ವ್ಯವಹಾರಗಳು ನಡೆದಿಲ್ಲ. ಆದರೆ ಅವರು ತಮ್ಮನ್ನು ರಾಜ್ಯದಲ್ಲಿ ಗುರುತಿಸಿಕೊಳ್ಳುವ ಹಾಗೂ ನನ್ನ ಘನತೆಗೆ ಧಕ್ಕೆ ತರುವ ಕಾರಣದಿಂದ ಈ ವಿಷಯವನ್ನು ಎತ್ತಿದ್ದಾರೆ ಎಂದಿರುವ ಅವರು, ಅವರ ಬಗ್ಗೆ ಮಾತನಾಡುವುದು ಸಾಕಷ್ಟಿದೆ. ಅದನ್ನು ಸಂದರ್ಭ ಬಂದಾಗ ಪ್ರಸ್ತುತಪಡಿಸುತ್ತೇನೆ ಎನ್ನುವ ಮೂಲಕ ನಿರ್ಮಾಪಕ ಶರ್ಮಾ ಮಾಡಿರುವ ಆರೋಪವನ್ನು ತಳ್ಳಿ ಹಾಕಿದ್ದಾರೆ. 

ವೆಬ್ದುನಿಯಾವನ್ನು ಓದಿ