ಹಿರೇಮಠ್ ವಿರುದ್ಧ ಪ್ರಹ್ಲಾದ್ ಜೋಷಿ ಮಾನನಷ್ಟ ಮೊಕದ್ದಮೆ

ಬುಧವಾರ, 14 ಮೇ 2014 (11:38 IST)
ತಮ್ಮನ್ನು ಭ್ರಷ್ಟಾಚಾರಿ ಎಂದು ಸಮಾಜ ಪರಿವರ್ತನಾ ಸಂಘದ ಅಧ್ಯಕ್ಷ ಹಿರೇಮಠ್ ಆರೋಪಿಸಿರುವುದರಿಂದ ಅವರ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿರುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಹೇಳಿಕೆ ನೀಡಿದ್ದಾರೆ. ಲೋಕಸಭೆ ಚುನಾವಣೆಗೆ ಮುನ್ನ ಭ್ರಷ್ಟರ ಪಟ್ಟಿಯನ್ನು ಹಿರೇಮಠ್ ಬಿಡುಗಡೆ ಮಾಡಿದ್ದರು. ಭ್ರಷ್ಟರ ಪಟ್ಟಿ ಬಿಡುಗಡೆ ಮಾಡಿದ ಬಳಿಕ ದಾಖಲೆ ಬಿಡುಗಡೆ ಮಾಡುವುದಾಗಿ ಹಿರೇಮಠ್ ಹೇಳಿಕೆ ನೀಡಿದ್ದರು.

ಆದರೆ ಇದುವರೆಗೆ ಯಾವುದೇ ದಾಖಲೆ ಬಿಡುಗಡೆ ಮಾಡಿಲ್ಲ ಎಂದು ಧಾರವಾಡದಲ್ಲಿ  ಜೋಷಿ ಹೇಳಿದ್ದಾರೆ.  ಯಾವುದೇ ಶಬ್ದದಿಂದ ನಿಂದಿಸಿದರೂ ಸಹಿಸಿಕೊಳ್ಳುವೆ. ಆದರೆ ಭ್ರಷ್ಟಾಚಾರಿ ಎಂದು ಆರೋಪ ಮಾಡಿದರೆ ತೀವ್ರ ನೋವಾಗುತ್ತದೆ ಎಂದು ಜೋಷಿ ಹೇಳಿದರು. ಈ ಹಿನ್ನೆಲೆಯಲ್ಲಿ ಧಾರವಾಡದ ಜೆಎಂಎಫ್‌ಸಿ ಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿರುವುದಾಗಿ  ಜೋಷಿ ಹೇಳಿಕೆ ನೀಡಿದರು.

ಸಾರ್ವಜನಿಕ ಜೀವನದಲ್ಲಿ ನಾನು ಸ್ವಚ್ಛ ಮತ್ತು ನಿಷ್ಕಳಂಕನಾಗಿದ್ದೇನೆ ಎಂದೂ ಜೋಷಿ ಹೇಳಿದರು.  ಈ ಕುರಿತು ಹಿರೇಮಠ್ ಪ್ರತಿಕ್ರಿಯಿಸುತ್ತಾ ಜೋಷಿ ಹೂಡಿರುವ ಮಾನನಷ್ಟ ಮೊಕದ್ದಮೆಯನ್ನು ಸ್ವಾಗತಿಸುವೆ. ಪ್ರಜಾತಂತ್ರದಲ್ಲಿ ಪ್ರತಿಯೊಬ್ಬರಿಗೂ ಪ್ರಕರಣ ದಾಖಲಿಸುವ ಹಕ್ಕಿದ್ದು, ಕೇಸ್ ಬಗ್ಗೆ ಮಾಹಿತಿ ಪಡೆದು ನಂತರ ಉತ್ತರಿಸುವೆ ಎಂದು ನುಡಿದಿದ್ದಾರೆ. 

ವೆಬ್ದುನಿಯಾವನ್ನು ಓದಿ