ರಾಜಕೀಯ ತೊರೆಯುವ ನಿರ್ಧಾರದತ್ತ ನಟಿ ರಮ್ಯ?

ಭಾನುವಾರ, 18 ಮೇ 2014 (17:48 IST)
ಲೋಕಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದ ನಟಿ ರಮ್ಯಾ ಅವರು ಮಂಡ್ಯದಲ್ಲಿರುವ ತಮ್ಮ ಮನೆಯನ್ನು ಖಾಲಿ ಮಾಡಿದ್ದಾರೆ.
 
ಮಂಡ್ಯದ ವಿದ್ಯಾನಗರದಲ್ಲಿರುವ ಬಾಡಿಗೆ ಮನೆಯಲ್ಲಿ ಮಾಜಿ ಸಂಸದೆ ರಮ್ಯಾ ಅವರು ವಾಸವಾಗಿದ್ದರು. ಆದರೆ ಇಂದು ರಮ್ಯಾ ಅವರು ತಮ್ಮ ಮನೆಯಲ್ಲಿದ್ದ ವಸ್ತುಗಳನ್ನು ಬೇರೆಡೆ ಸಾಗಿಸಿದ್ದಾರೆ ಎಂದು ತಿಳಿದು ಬಂದಿದೆ. 
 
ನಟಿ ರಮ್ಯಾ ಅವರು ಮನೆ ಖಾಲಿ ಮಾಡಿರುವ ವಿಚಾರವನ್ನು ಮನೆ ಮಾಲೀಕ ಸಾದತ್ ಅಲಿಖಾನ್ ಅವರು ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ.
 
ಈ ಹಿಂದೆ ನಡೆದ ಲೋಕಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ರಮ್ಯಾ ಅವರು ಭಾರಿ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆದರೆ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ರಮ್ಯಾ ಅವರು ಎರಡನೇ ಸ್ಥಾನಕ್ಕೆ ಕುಸಿದಿದ್ದು, ಚುನಾವಣೆಯಲ್ಲಿ ಸೋಲು ಕಾಣುವ ಮೂಲಕ ತೀವ್ರ ಮುಖಭಂಗವನ್ನು ಅನುಭವಿಸಿದ್ದಾರೆ. ರಮ್ಯಾ ಅವರ ಸೋಲಿಗೆ ಮಂಡ್ಯ ಕಾಂಗ್ರೆಸ್ ಬಣ ರಾಜಕೀಯವೇ ಕಾರಣ ಎನ್ನಲಾಗುತ್ತಿದೆ. ಮಂಡ್ಯದಲ್ಲಿ ಅಂಬರೀಶ್ ಮತ್ತು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣಾ ಅವರ ಬೆಂಬಲಿಗರ ನಡುವೆ ತೀವ್ರ ಭಿನ್ನಾಭಿಪ್ರಾಯಗಳಿವೆ.
 
ಇದು ಕಳೆದ ಲೋಕಸಭಾ ಉಪ ಚುನಾವಣಾ ಪ್ರಚಾರದಲ್ಲಿಯೇ ಪ್ರತಿಬಿಂಬಿಸಿತ್ತು. ಆದರೆ ರಾಜ್ಯ ನಾಯಕರೆಲ್ಲರೂ ಒಗ್ಗೂಡಿ ಶ್ರಮಿಸಿದ್ದರಿಂದ ರಮ್ಯಾ ಅವರು ಗೆಲುವು ಸಾಧಿಸಿದ್ದರು. ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ರಮ್ಯಾ ಅವರಿಗೆ ರಾಜ್ಯ ನಾಯಕರ ಪ್ರಚಾರದ ಕೊರತೆ ಎದುರಾಗಿದ್ದೇ ಅವರ ಸೋಲಿಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
 
ಈ ಹಿಂದೆ ತಾವು ಸೋತರೂ ಗೆದ್ದರೂ ಮಂಡ್ಯ ಜಿಲ್ಲೆಯಲ್ಲಿಯೇ ವಾಸ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದ ನಟಿ ರಮ್ಯಾ ಅವರು, ಇದೀಗ ತಮ್ಮ ಮನೆಯನ್ನು ಖಾಲಿ ಮಾಡಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ರಮ್ಯಾ ಅವರು ರಾಜಕೀಯ ತೊರೆಯುವ ನಿರ್ಧಾರದಿಂದಾಗಿ ಮಂಡ್ಯ ಜಿಲ್ಲೆಯನ್ನು ತೊರೆದಿರಬಹುದು ಎಂದು ಊಹಿಸಲಾಗುತ್ತಿದೆ.
 

ವೆಬ್ದುನಿಯಾವನ್ನು ಓದಿ