ರಾಘವೇಶ್ವರ ಶ್ರೀಗಳ 2ನೇ ಅತ್ಯಾಚಾರ ಪ್ರಕರಣ: ಸಿಐಡಿ ಅಧಿಕಾರಿಗಳಿಂದ ಮಹಜರು

ಗುರುವಾರ, 1 ಅಕ್ಟೋಬರ್ 2015 (16:29 IST)
ಶಿವಮೊಗ್ಗ ಜಿಲ್ಲೆಯ ಹೊಸನಗರದ ರಾಮಚಂದ್ರಾಪುರ ಮಠದ ಪೀಠಾಧ್ಯಕ್ಷ ರಾಘವೇಶ್ವರ ಶ್ರೀಗಳ ವಿರುದ್ಧ ದಾಖಲಾಗಿರುವ ಎರಡನೇ ಅತ್ಯಾಚಾರ ಪ್ರಕರಣದ ತನಿಖೆಯನ್ನು ಸಿಐಡಿ ಅಧಿಕಾರಿಗಳು ಚುರುಕುಗೊಳಿಸಿದ್ದು, ಇಂದು ಸಂತ್ರಸ್ತ ಮಹಿಳೆಯನ್ನು ನಗರದ ರಾಜಗೋಪಾಲನಗರದಲ್ಲಿರುವ ಮಠದ ಶಾಖೆಗೆ ಕರೆದೊಯ್ದು ಮಹಜರು ಕಾರ್ಯ ಆರಂಭಿಸಿದ್ದಾರೆ.  
 
ಹೌದು, ನಿನ್ನೆಯಷ್ಟೇ ಜಾಮೀನು ಪಡೆದು ನಿಟ್ಟುಸಿರು ಬಿಡುತ್ತಿದ್ದ ಶ್ರೀಗಳಿಗೆ ಇದು ಮತ್ತೊಂದು ಆಘಾತ ಉಂಟು ಮಾಡಿದೆ ಎಂದರೆ ತಪ್ಪಾಗಲಾರದು. ಸಿಐಡಿ ಅಧಿಕಾರಿಗಳ ತಂಡದ ತನಿಖಾಧಿಕಾರಿ ಡಿವೈಎಸ್ಪಿ ಧರಣೇಶ್ ಅವರ ನೇತೃತ್ವದ ತಂಡ ಮಠಕ್ಕೆ ತೆರಳಿದ್ದು, ಮಹಿಳೆಯ ಹೇಳಿಕೆಯನ್ನಾಧರಿಸಿ ಅತ್ಯಾಚಾರ ಎಸಗಿದ ಸ್ಥಳವನ್ನು ಪರಿಶೀಲಿಸುತ್ತಿದ್ದಾರೆ. ಅಲ್ಲದೆ ಮಹಜರು ಮಾಡಿಕೊಳ್ಳುತ್ತಿದ್ದಾರೆ. 
 
ಇನ್ನು ಈ ಮಹಜರು ಕಾರ್ಯವು ಸುಮಾರು 2 ಗಂಟೆಗಳ ಕಾಲ ನಡೆಯಬಹುದು ಎಂದು ಹೇಳಲಾಗುತ್ತಿದ್ದು, ಸಂಜೆ ವೇಳೆಗೆ ಮುಕ್ತಾಯವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಈ ವೇಳೆ ಮಹಜರು ಮಾತ್ರವಲ್ಲದೆ ಮಠದ ಕೆಲ ಭಕ್ತಾದಿಗಳು ಹಾಗೂ ಸಿಬ್ಬಂದಿಯಿಂದ ಸಿಐಢಿ ಅಧಿಕಾರಿಗಳು ಅಗತ್ಯ ಮಾಹಿತಿ ಕಲೆ ಹಾಕಲಿದ್ದಾರೆ ಎಂದು ಹೇಳಲಾಗಿದೆ.
 
ಇನ್ನು ಶ್ರೀಗಳ ವಿರುದ್ಧ ಈ ಹಿಂದೆಯೇ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆ ವೈದ್ಯಕೀಯ ತಪಾಸಣೆಗೆ ಹಾಜರಾಗಬೇಕೋ ಅಥವಾ ಎರಡನೇ ಪ್ರಕರಣದ ಜಾಮೀನು ಅರ್ಜಿಯ ವಿಚಾರಣೆಗೆ ಹಾಜರಾಗಬೇಕೋ ಎಂಬ ಗೊಂದಲದಲ್ಲಿ ಶ್ರೀಗಳಿದ್ದರು. ಕೊನೆಗೂ ವೈದ್ಯಕೀಯ ಪರೀಕ್ಷೆಗೆ ಹಾಜರಾಗದೆ, ಜಾಮೀನು ಪಡೆಯುವಲ್ಲಿ ಸಫಲರಾಗಿದ್ದರು. 

ವೆಬ್ದುನಿಯಾವನ್ನು ಓದಿ