ಬೆಂಗಳೂರು: ಶಾಲೆಯಲ್ಲಿ ಮತ್ತೆ ಲೈಂಗಿಕ ದೌರ್ಜನ್ಯ

ಶುಕ್ರವಾರ, 31 ಅಕ್ಟೋಬರ್ 2014 (09:07 IST)
ಬೆಂಗಳೂರಿನಲ್ಲಿ ಪುಟ್ಟ ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳು ನಿಲ್ಲುವ ಲಕ್ಷಣಗಳೇ ಕಾಣುತ್ತಿಲ್ಲ. ಮಾರತಹಳ್ಳಿಯ ಘಟನೆ ಮನಸ್ಸಿಂದ ಮಾಸುವ ಮುನ್ನವೇ ಕಳೆದ ವಾರ ಜಾಲಹಳ್ಳಿಯ ಶಾಲೆಯಲ್ಲಿ 3 ವರ್ಷ ಮಗುವಿನ ಮೇಲೆ ಅತ್ಯಾಚಾರ ನಡೆದಿತ್ತು. ಈ ಪ್ರಕರಣದ ಬೆನ್ನ ಹಿಂದೆಯೇ ನಗರದಲ್ಲಿ ಮತ್ತೆ ಅದೇ ರೀತಿಯ ಘಟನೆ ಮರುಕಳಿಸಿದೆ.

ಇಂದಿರಾ ನಗರದ ಕೆಂಬ್ರಿಡ್ಜ್ ಶಾಲೆಯಲ್ಲಿ ಈ ಘಟನೆ ನಡೆದಿದ್ದು, 6 ವರ್ಷದ ಬಾಲಕಿಯ ಮೇಲೆ ದೈಹಿಕ ಶಿಕ್ಷಕ ಜೈ ಶಂಕರ್(37)  ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ವರದಿಯಾಗಿದೆ. ಮೂಲತಃ ತಮಿಳುನಾಡು ಮೂಲದವನಾದ ಆರೋಪಿ ಕಳೆದ 7 ವರ್ಷಗಳಿಂದ ಇದೇ ಶಾಲೆಯಲ್ಲಿ ಹಿಂದಿ ಮತ್ತು  ದೈಹಿಕ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ಅಕ್ಟೋಬರ್ 28 ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. 
 
ಜೀವನ್ ಭೀಮಾ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪೊಲೀಸರ ವಶದಲ್ಲಿದ್ದಾನೆ. 
 
ಇಂದು ಶಾಲೆಗೆ ರಜೆ ಘೋಷಿಸಲಾಗಿದೆ.
 
ಶಾಲೆಗೆ ಬಂಗಳೂರು ದಕ್ಷಿಣ ವಲಯ ಬಿಇಒ ರಮೇಶ್ ಭೇಟಿ ನೀಡಿದ್ದು, ಶಾಲೆಯ ದಾಖಲಾತಿ ಪರಿಶೀಲನೆ ನಡೆಸುತ್ತಿದ್ದಾರೆ ಮತ್ತು ಶಾಲಾ ಆಡಳಿತ ಮಂಡಳಿ ಜತೆ ಚರ್ಚೆ ನಡೆಸಿದ್ದಾರೆ. 
 
ಘಟನೆಯನ್ನು ಖಂಡಿಸಿ ಶಾಲೆಯ ಮುಂದೆ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪ್ರತಿಭಟನೆಯನ್ನು ಕೈಗೊಂಡಿದ್ದಾರೆ. 
 
 ಕಳೆದ ನಾಲ್ಕು ತಿಂಗಳಲ್ಲಿ ಶಾಲಾ ಮಕ್ಕಳ ಮೇಲೆ ನಡೆದ 4ನೆಯ ಪ್ರಕರಣ ಇದಾಗಿದೆ. 

ವೆಬ್ದುನಿಯಾವನ್ನು ಓದಿ