ಮಹಿಳೆ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ: ರಾಜಾನುಕುಂಟೆಯಲ್ಲಿ ಪ್ರಕರಣ

ಶನಿವಾರ, 11 ಏಪ್ರಿಲ್ 2015 (12:23 IST)
ಮಹಿಳೆಯೋರ್ವಳ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆಗೈದಿರುವ ಧಾರುಣ ಘಟನೆ ನಿನ್ನೆ ರಾತ್ರಿ ಸಂಭವಿಸಿದ್ದು, ನಗರದ ಉತ್ತರ ತಾಲೂಕಿನ ರಾಜಾನಕುಂಟೆಯ ನೀಲಗಿರಿ ತೋಪಿನಲ್ಲಿ ಕಂಡು ಬಂದಿದೆ. ಮೃತ ಮಹಿಳೆಯ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲ. 
 
ಪ್ರಕರಣದ ಹಿನ್ನೆಲೆ: ಇಂದು ಬೆಳಗ್ಗೆ ಇಲ್ಲಿನ ನಿವಾಸಿಯೋರ್ವರು ಶೌಚಾಲಯಕ್ಕೆಂದು ತೋಪಿಗೆ ತೆರಳಿದ್ದರು. ಈ ವೇಳೆ ಮೃತ ಮಹಿಳೆಯ ದೇಹ ಕಂಡು ಬಂದಿದೆ. ಬಳಿಕ ಪ್ರಕರಣ ಸಂಬಂಧ ಅವರೇ ಖುದ್ದು ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಬಳಿಕ, ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ವರಿಷ್ಠಾಧಿಕಾರಿ ಹಾಗೂ ಇತರೆ ಉನ್ನತ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. 
 
ಪ್ರಕರಣ ಸಂಬಂಧ ಅಭಿಪ್ರಾಯ ವ್ಯಕ್ತಪಡಿಸಿರುವ ಪೊಲೀಸರು, ಎಲ್ಲಿಯೋ ಕೊಲೆ ಮಾಡಿ ಬಳಿಕ ಮೃತದೇಹವನ್ನು ಪತ್ತೆ ಹಚ್ಚಬಾರದು ಎಂಬ ಕಾರಣಕ್ಕೆ ತಲೆ ಮೇಲೆ ಕಲ್ಲು ಎತ್ತಿ ಹಾಕಲಾಗಿದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. 
 
ಪ್ರಸ್ತುತ ರಾಜಾನುಕುಂಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ. ಘಟನೆಯಿಂದ ತೋಪಿನ ಸುತ್ತಮುತ್ತಲೂ ಪ್ರಸ್ತುತ ಆತಂಕದ ವಾತಾವರಣ ಸೃಷ್ಟಿಯಾಗಿದೆ. 

ವೆಬ್ದುನಿಯಾವನ್ನು ಓದಿ