ಹೈವೋಲ್ಟೇಜ್ ಕ್ರಿಕೆಟ್ ಪರಿಣಾಮ ಸದನಕ್ಕೆ ಗೈರಾದ ಜನಪ್ರತಿನಿಧಿಗಳು

ಗುರುವಾರ, 26 ಮಾರ್ಚ್ 2015 (13:42 IST)
ಹೈವೋಲ್ಟೇಜ್ ಕ್ರಿಕೆಟ್ ಬಿಸಿ ಇಂದು ಸರ್ಕಾರದ ಕಲಾಪಕ್ಕೂ ತಟ್ಟಿದ್ದು, ಕಲಾಪದಲ್ಲಿ ಕೇವಲ ಬೆರಳೇಣಿಕೆ ಮಂದಿ ಜನಪ್ರತಿನಿಧಿಗಳಷ್ಟೇ ಭಾಗವಹಿಸಿದ್ದರು. 
 
ಇಂದಿನ ಕಲಾಪಕ್ಕೆ ಕೇವಲ 30 ರಿಂದ 40 ಮಂದಿ ಜನಪ್ರತಿನಿಧಿಗಳು ಮಾತ್ರ ಭಾಗವಹಿಸಿದ್ದರು. ಉಳಿದ ಎಲ್ಲಾ ಸ್ಥಾನಗಳು ಖಾಲಿ ಉಳಿದಿದ್ದವು. ಇದನ್ನು ಕಂಡ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು ಸದಸ್ಯರ ವರ್ತನೆ ವಿರುದ್ಧ ಗರಂ ಆಗಿದ್ದು, ಸ್ವಲ್ಪವಾದರೂ ಗಂಭೀರತೆ ಇಲ್ಲ ಎಂದರೆ ಸರ್ಕಾರ ನಡೆಸಲು ಹೇಗೆ ಸಾಧ್ಯ ಎಂದು ಬೇಸರ ವ್ಯಕ್ತಪಡಿಸಿದರು. 
 
ವಿರೋಧ ಪಕ್ಷದ ನಾಯಕರು ಹಾಗೂ ಸದಸ್ಯರೂ ಸೇರಿದಂತೆ ಸರ್ಕಾರದ ಯಾವೊಬ್ಬ ಸಚಿವರೂ ಕಲಾಪಕ್ಕೆ ಆಗಮಿಸಿರಲಿಲ್ಲ. ಕೇವಲ ನಲವತ್ತು ಮಂದಿ ಜನಪ್ರತಿನಿಧಿಗಳಿದ್ದ ಕಾರಣ ಸಭಾಧ್ಯಕ್ಷರು ಬೇಸರ ವ್ಯಕ್ತಪಡಿಸಿದರು. ಇದೇ ರೀತಿಯ ವಾತಾವರಣವು ವಿಧಾನ ಪರಿಷತ್‌ನಲ್ಲಿಯೂ ಕಂಡು ಬಂತು.  
 
ಹಾಜರಾಗದಿರಲು ಕಾರಣವೇನು ? 
2015ನೇ ಸಾಲಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಹಿನ್ನೆಲೆಯಲ್ಲಿ ಇಂದು ಆಸ್ಟ್ರೇಲಿಯಾದ ಸಿಡ್ನಿ ಕ್ರೀಡಾಂಗಣದಲ್ಲಿ ಎರಡನೇ ಸೆಮಿ ಫೈನಲ್ ಪಂದ್ಯಾವಳಿ ನಡೆಯುತ್ತಿದ್ದು, ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಹಣಾಹಣಿ ನಡೆಸುತ್ತಿವೆ.
 
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಆಸ್ಟ್ರೇಲಿಯಾ ತಂಡ, 7 ವಿಕೆಟ್ ನಷ್ಟಕ್ಕೆ 328 ರನ್ ಕಲೆ ಹಾಕಿದೆ. ಈ ಹಿನ್ನೆಲೆಯಲ್ಲಿ ಎದುರಾಳಿಯಾಗಿರುವ ಭಾರತ ತಂಡವು 329 ರನ್‌ಗಳ ಗುರಿಯನ್ನು ಬೆನ್ನಟ್ಟಬೇಕಿದೆ. ಈ ರೋಚಕ ಆಟವನ್ನು ವೀಕ್ಷಿಸಲು ರಾಜ್ಯದ ಜನಪ್ರತಿನಿಧಿಗಳೂ ಕೂಡ ಉತ್ಸಾಹ ತೋರಿದ್ದು, ಸದನದ ಕಲಾಪಕ್ಕೆ ಗೈರಾಗಿದ್ದಾರೆ. 
 

ವೆಬ್ದುನಿಯಾವನ್ನು ಓದಿ