ಮಣಿಪುರ ಯುವತಿ ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪಿ ಬಂಧನ

ಮಂಗಳವಾರ, 3 ಮೇ 2016 (08:56 IST)
ಬೆಂಗಳೂರಿ ಕತ್ರಿಗುಪ್ಪೆಯಲ್ಲಿ ಮಣಿಪುರ ಮೂಲದ ಯುವತಿಯನ್ನು ಅಪಹರಣ ಮಾಡಿ ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಸಫಲರಾಗಿದ್ದಾರೆ. ಆರೋಪಿಯನ್ನು ಅಕ್ಷಯ್ ಕುಮಾರ್ (24) ಎಂದು ಗುರುತಿಸಲಾಗಿದ್ದು ಆತ ರೌಡಿಶೀಟರ್ ಆಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇಂದು ಮಧ್ಯಾಹ್ನ ಆತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುತ್ತದೆ. 

ಖಾಸಗಿ ವಾಹಿನಿಯಲ್ಲಿ ಪ್ರಸಾರವಾದ ವಿಸ್ತ್ರತ ವರದಿ ನೋಡಿ ಪರಾರಿಯಾಗುವ ಹಂತದಲ್ಲಿದ್ದ ಆರೋಪಿಯ ಜಾಡು ಹಿಡಿದ ಚನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರು ಸೋಮವಾರ ರಾತ್ರಿ ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.  ಈತ ಉಬರ್ ಕಾರ್ ಚಾಲಕನಾಗಿದ್ದು ಇತ್ತೀಚಿಗೆ ರೌಡಿಗಳೊಂದಿಗೆ ಗುರುತಿಸಿಕೊಂಡಿದ್ದ. ಯುವತಿಯ ಅಪಹರಣಕ್ಕೆ ಯತ್ನಿಸಿದ್ದನ್ನು ಆರೋಪಿ ಒಪ್ಪಿಕೊಂಡಿದ್ದಾನೆ. 
 
ಆತನನ್ನು ಬಂಧಿಸಲು ಬನಶಂಕರಿ ಉಪವಿಭಾಗ ಎಸಿಪಿ ಲೋಕೇಶ್ ಕುಮಾರ್ ನೇತೃತ್ವದಲ್ಲಿ ಎರಡು ತಂಡಗಳನ್ನು ರಚಿಸಲಾಗಿತ್ತು. ಆತ ರಾಮನಗರ ಮೂಲದವನಾಗಿದ್ದು 2014ರಲ್ಲಿ ನಡೆದ ಶಶಿಕುಮಾರ್ ಎಂಬುವವರ ಕೊಲೆ ಯತ್ನ ಪ್ರಕರಣದ ಆರೋಪಿಯಾಗಿದ್ದಾನೆ. ಈತನ ಮೇಲೆ ರೌಡಿ ಶೀಟರ್ ಫೈಲ್ ಕೂಡ ದಾಖಲಾಗಿತ್ತು.
 
ಕಳೆದ ಏಪ್ರಿಲ್ 23 ರ ರಾತ್ರಿ 9.50 ರ ಸುಮಾರಿಗೆ ತನ್ನ ಪಿಜಿ ಮುಂದೆ ನಿಂತಿದ್ದ ಮಣಿಪುರ ಮೂಲದ ಯುವತಿಯನ್ನು ದುಷ್ಕರ್ಮಿಯೊಬ್ಬ ಹೊತ್ತೊಯ್ಯುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಯುವತಿ ಕಿರುಚಾಡಿದ ಬಳಿಕ ದುಷ್ಕರ್ಮಿ ಅವಳನ್ನು ಬಿಟ್ಟು ಪರಾರಿಯಾಗಿದ್ದ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.   
 

ವೆಬ್ದುನಿಯಾವನ್ನು ಓದಿ